ಸಕಲೇಶಪುರ: ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಿರಿಯೂರು ಗ್ರಾಮದ ಗುಡ್ಡದಲ್ಲಿ ಪುರಾತನ ಕಾಲದ ಜೈನ ಬಸದಿಯೊಂದು ಸರ್ಕಾರದ ನಿರ್ಲಕ್ಷದಿಂದ ಕಾಲ ಗರ್ಭ ಸೇರುವಂತಾಗಿದೆ. ಈ ಜೈನ ಬಸದಿಯನ್ನು ಜೀರ್ಣೋದ್ಧಾರ ಮಾಡಿ ಪ್ರವಾಸಿ ತಾಣವನ್ನಾಗಿ ಅಭಿರುದ್ದಿಪಡಿಸಬೇಕೆಂದು ವಳಲಹಳ್ಳಿ ಗ್ರಾಮ ಪಂಚಾಯಿತಿಯ ಸುತ್ತ ಮುತ್ತಲ ಗ್ರಾಮಸ್ಥರು ಸಂಬಂಧ ಪಟ್ಟ ಇಲಾಖೆಗೆ ಒತ್ತಾಯಿಸಿದ್ದಾರೆ.
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೂರು ಗ್ರಾಮದ ಎತ್ತರವಾದ ಹಿರಿಯೂರು ಗುಡ್ಡದಲ್ಲಿರುವ ಈ ಪುರಾತನ ಜೈನ ಬಸದಿಯೊಂದು ಪುರಾತತ್ವ ಇಲಾಖೆಯ ನಿರ್ಲಕ್ಷದಿಂದ ಅವನತಿ ಹಾದಿ ಹಿಡಿದಿದೆ.
ಈ ಬಸದಿಯು ವಳಲಹಳ್ಳಿ ಗ್ರಾಮ ಪಂಚಾಯಿತಿಕಚೇರಿಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ ಈ ಜೈನ ಬಸದಿ. ಕಾಲು ದಾರಿಯಲ್ಲಿ ಹೋದರೆ ದಟ್ಟ ಕಾಡುಗಳ ಮಧ್ಯೆ ಚೌಕಕಾರವಾಗಿ ಕಲ್ಲಿನಿಂದ ನಿರ್ಮಾಣ ಮಾಡಿರುವ ಸುಂದರ ಜೈನ ಬಸದಿಯೊಂದು ಕಾಣುತ್ತದೆ. ಇದು ತುಂಬಾ ಹಳೆಯ ಜೈನ ಬಸದಿಯಾಗಿದ್ದು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರಬಹುದೆಂದು ಕೆಲವು ಸ್ಥಳೀಯ ಹಿರಿಯರು ಅಭಿಪ್ರಾಯ ಪಡುತ್ತಾರೆ. ಹಿರಿಯೂರು ಗ್ರಾಮದಲ್ಲಿ ಈ ಹಿಂದೆ ಹೆಚ್ಚು ಜೈನರು ವಾಸಿಸುತ್ತಿದ್ದರಬಹುದು, ಹಾಗಾಗಿ ಜೈನ ಬಸದಿ ಈ ಭಾಗದಲ್ಲಿ ನಿರ್ಮಾಣ ವಾಗಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತದೆ.ಈ ಬಸದಿಯನ್ನು ಅಭಿವೃದ್ದಿಪಡಿಸಿದರೆ ಒಳ್ಳೆಯ ಪ್ರವಾಸಿತಾಣವನ್ನಾಗಿ ಸಬಹುದು ಎನ್ನುತ್ತಾರೆ ಸ್ಥಳೀಯರು.
ಈ ಭಾಗದಲ್ಲಿ ಈಗಾಗಲೆ ಪ್ರವಾಸಿ ತಾಣಗಳಾದ ಹೊಸಳ್ಳಿ ಬೆಟ್ಟ, ಅಬ್ಬಿ ಫಾಲ್ಸ್, ಹಾಗೂ ಬಿಸಲೆ ಘಾಟ್ ಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು ಇದೇ ದಾರಿಯಲ್ಲಿರುವ ಈ ಪುರಾತನ ಜೈನ ಬಸದಿ ಅಭಿವೃದ್ಧಿಯಾದರೆ ಇದು ಕೂಡ ಒಂದು ಒಳ್ಳೆಯ ಪ್ರವಾಸಿಯ ತಾಣವಾಗುತ್ತದೆ . ಈ ಭಾಗಕ್ಕೆ ದಿನಕ್ಕೆ ನೂರಾರು ಮಂದಿ ಬರುವ ಪ್ರವಾಸಿಗರು ಇಲ್ಲಿಗು ಭೇಟಿ ಕೊಟ್ಟು ಪುರಾತನ ಜೈನ ಬಸದಿಯನ್ನು ವೀಕ್ಷಿಸುವಂತೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಹಾಗಾಗಿ ಕೂಡಲೇ ಇದಕ್ಕೆ ಸಂಬಂಧ ಪಟ್ಟ ಇಲಾಖೆ , ತಾಲೂಕು ತಹಸಿಲ್ದಾರರು , ಜಿಲ್ಲಾಧಿಕಾರಿಗಳು, ಹಾಗೂ ಇತಿಹಾಸ ತಜ್ಞರುಗಳು ಇಲ್ಲಿಗೆ ಬೇಟಿ ಕೊಟ್ಟು ಇದರ ಬಗ್ಗೆ ಪರಿಶೀಲಿಸಿ, ಇಲ್ಲಿಂದ ತೆಗೆದುಕೊಂಡು ಹೋದ ವಿಗ್ರಹಗಳು ಮತ್ತು ಕೆತ್ತನೆಗಳನ್ನು ಇಲ್ಲಿಗೆ ತಂದು ಇಡುವುದರ ಜೊತೆಗೆ ಈ ಬಸದಿಯನ್ನು ಜೀರ್ಣೋದ್ಧಾರ ಮಾಡಬೇಕಾಗಿದೆ.