ಹೊಳೆನರಸೀಪುರ: ತಾಲೂಕಿನ ಕಟ್ಟೆ ಹೊಸೂರು ಗ್ರಾಮದ ನಿವಾಸಿ ರಂಗಸ್ವಾಮಿ ಅವರ ತೋಟದ ಮನೆಯ ಮುಂಭಾಗದಲ್ಲಿ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ.
ರಂಗಸ್ವಾಮಿ ಅವರು ತೋಟದಲ್ಲಿ ಮನೆ ಮಾಡಿಕೊಂಡು ಅಲ್ಲಿಯೇ ವಾಸವಿದ್ದು ಮನೆಯ ಮುಂಭಾಗ ನಾಯಿಯನ್ನು ಬೋನಿನೊಳಗೆ ಕಟ್ಟಿ ಹಾಕಿದ್ದರು ನಾಯಿಯನ್ನು ಬೇಟೆಯಾಡಲು ಬಂದಿದ್ದ ಚಿರತೆ ನಾಯಿ ಬೇಟೆಯಾಡಲು ಇನ್ನಿಲ್ಲದ ಕಸರತ್ತು ನಡೆಸಿದೆ.
ಆದರೆ ನಾಯಿ ಅತಿ ಹೆಚ್ಚು ಬೊಗಳಿದ್ದರಿಂದ ರಂಗಸ್ವಾಮಿ ಅವರು ತಕ್ಷಣ ಬಾಗಿಲು ತೆರೆದು ನೋಡಿದಾಗ ಚಿರತೆ ಯನ್ನು ನೋಡಿ ಗಾಬರಿಗೊಂಡಿದ್ದಾರೆ, ಇದರಿಂದ ಆತಂಕಗೊಂಡ ಕುಟುಂಬಸ್ಥರು ಜೋರಾಗಿ ಕಿರಿಚಿಕೊಂಡು ಕೈಗೆ ಸಿಕ್ಕಿದ ವಸ್ತುಗಳನ್ನೇ ಅದರ ಮೇಲೆ ಎಸೆದಾಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಪರಾರಿಯಾಗಿದೆ.
ಕಳೆದ ವಾರ ಇದೇ ಮನೆಯ ಮುಂದಿದ್ದ ನಾಯಿಯನ್ನು ಹೊತ್ತೊಯ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಯಾಗಿತ್ತು ಅಂತಹದೊಂದೇ ದೃಶ್ಯ ರಾತ್ರಿ ೨ ಗಂಟೆ ೫೧ ನಿಮಿಷದಲ್ಲಿ ನಾಯಿ ಬೇಟೆಯಾಡಲು ಬರುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಭಾಗದ ಜನರು ತುಂಬಾ ಆತಂಕಗೊಂಡು ತಮ್ಮ ಜಮೀನು ಬಳಿ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರ ಇಂತಹ ಘಟನೆ ನಡೆದಾಗ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೆ ಕ್ರಮ ಕೈಗೊಂಡಿರಲಿಲ್ಲ. ರಾತ್ರಿ ನಡೆದ ದೃಶ್ಯಾವಳಿಯನ್ನು ಅಧಿಕಾರಿಗಳಿಗೆ ತಿಳಿಯಪಡಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಸ್ಥಳಕ್ಕೆ ಬೋನು ಇಡಲಾಗುವುದು ಎಂದು ತಿಳಿಸಿ ಹೋಗಿದ್ದಾರೆ ಎಂದು ರಂಗಸ್ವಾಮಿ ಅವರು ಹೇಳಿದ್ದಾರೆ.