ಕೊಣನೂರು: ರಾಮನಾಥಪುರ ಹೋಬಳಿಯ ಬಸವಾಪಟ್ಟಣ ಗ್ರಾಮದಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿರುವ ಹಾಗೂ ಸ್ಥಳೀಯ ವಿಪ್ರ ಭಾಂಧವರು ಸೇರಿ ಬಹಳ ವಿಜೃಂಭಣೆಯಿಂದ ಭಾನುವಾರ ಓಕಳಿ ಆಚರಿಸಿದರು. ಇಲ್ಲಿ ಓಕಳಿಯನ್ನು ಚಿಕ್ಕ ಮಕ್ಕಳಿಂದ ಹಿಡಿದು ೮೦ ವರ್ಷದ ವಯೋ ವೃದ್ದರವರೆಗೂ ಒಗ್ಗಟ್ಟಾಗಿ ಬಹಳ ಸಂತೋಷದಿಂದ ಹಬ್ಬದಂತೆ ಓಕಳಿ ಆಚರಿಸಿದರು.
ಶ್ರೀ ರಾಮ ಪಟ್ಟಾಭಿಷೇಕದ ಮರುದಿನ ಬೆಳಿಗ್ಗೆ ಹನುಮಂತನ ದೇವಸ್ಥಾನದಲ್ಲಿ ಉತ್ಸವ, ಪೂಜೆ, ಮಹಾಮಂಗಳಾರತಿ ಮುಗಿಸಿ ಪ್ರಸಾದ ಸ್ವೀಕರಿಸಿದ ನಂತರ ಎಲ್ಲಾ ಗಂಡಸರು ಹಾಗೂ ಹೆಂಗಸರು ಓಕಳಿ ಆಡಲು ಗ್ರಾಮದ ಎಲ್ಲರ ಮನೆಯ ಮುಂದೆಯೂ ಹೋಗಿ ಇಟ್ಟಿರುವ ಬಣ್ಣದ ನೀರನ್ನು ಒಬ್ಬರಿಗೊಬ್ಬರು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರು. ದಾರಿಯುದ್ದಕ್ಕೂ ಹನುಮನ ಭಜನೆ, ಕೀರ್ತನೆಗಳನ್ನು ಹೇಳಿಕೊಂಡು ಸಾಗಿದರು.
ಕೊನೆಯಲ್ಲಿ ಶ್ರೀ ರಾಮಮಂದಿರದ ಆವರಣದಲ್ಲಿ ಎಲ್ಲಾ ಪುರುಷರೂ ಸೇರಿಕೊಂ ಡು ಸುತ್ತಲೂ ದೊಡ್ಡ ದೊಡ್ಡ ಹಂಡೆಗಳಲ್ಲಿ ಓಕಳಿ ನೀರನ್ನು ಇಟ್ಟುಕೊಂಡು ಸುಮಾರು ಒಂದು ಗಂಟೆಗಳ ಕಾಲ ಭಜನೆ, ಕೀರ್ತನೆ ಗಳನ್ನು ಹೇಳಿಕೊಂಡು ನೃತ್ಯವನ್ನು ಮಾಡುತ್ತಾ ಹಂಡೆಯಿಂದ ನೀರ ನ್ನು ತೆಗೆದುಕೊಂಡು ಒಬ್ಬರಿಗೊ ಬ್ಬರು ಪರಸ್ಪರ ಎರಚಾಡುತ್ತಾ ಸಂಭ್ರಮದಿಂದ ಓಕಳಿ ಆಚರಿಸುವ ಮೂಲಕ ಹನುಮಂತೋತ್ಸವಕ್ಕೆ ತೆರೆ ಎಳೆದರು.
ಈ ಕಾರ್ಯಕ್ರಮವನ್ನು ವೀಕ್ಷಿಸಲು ಗ್ರಾಮದ ಹೆಂಗಸರು ಮತ್ತು ಮಕ್ಕಳು ಮನೆಗಳ ಮಹಡಿ ಮೇಲಿನಿಂದ ನಿಂತು ವೀಕ್ಷಿಸುವ ಮೂಲಕ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.