ಹಾಸನ: ಹಾಸನದ ಏಕೈಕ ಪಾರ್ಕ್ ಮಹಾರಾಜ ಪಾರ್ಕ್ – ಶಾಸಕ ಪ್ರೀತಮ್ಗೌಡ ಸುಂದರ ರೂಪ ಕೊಡುತ್ತಿರುವುದು ಹಾಸನ ಕ್ಷೇತ್ರದ ಜನತೆಗೆ ಸಂತಸ ತಂದಿದೆ.
ಈ ಪಾರ್ಕ್ನ್ನು ದಿ. ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿ, ಹೆಚ್.ಡಿ. ದೇವೇಗೌಡರು ನೀರಾವರಿ ಮಂತ್ರಿಯಾಗಿದ್ದಾಗ ೧೯೮೦ರ ಆಸುಪಾಸಿನಲ್ಲಿ ಈ ಮಹಾರಾಜ ಪಾರ್ಕ್ ಜೀರ್ಣೋದ್ಧಾರವಾಗಿತ್ತು. ಸುಮಾರು ೪೦ ರಿಂದ ೫೦ ವರ್ಷವಾಯಿತು. ಅಲ್ಲಿಂದ ಇಲ್ಲಿಯವರೆಗೂ ಈ ಪಾರ್ಕಿ ನನೆಗುದಿಗೆ ಬಿದ್ದಿತ್ತು. ಮಾಜಿ ನಗರಸಭಾ ಅಧ್ಯಕ್ಷ ದಿ. ಎಚ್.ಎಸ್. ಕೃಷ್ಣಮೂರ್ತಿ ಒತ್ತಾಸೆಯಿಂದ ಈಜುಕೊಳ ನಿರ್ಮಾಣವಾಗಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿಯಾವರೆಗೂ ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಮಹಾರಾಜ ಪಾರ್ಕ್ನಲ್ಲಿ ನಡೆದಿರಲಿಲ್ಲ.
ಆದರೆ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಪ್ರೀತಮ್ಗೌಡ ಶಾಸಕರಾಗಿ ಚುನಾಯಿತರಾದ ನಂತರ ಮಹಾರಾಜ ಪಾರ್ಕಿನ ಚಿತ್ರಣವೇ ಬದಲಾಯಿತು. ಮಹಾರಾಜ ಪಾರ್ಕಿನ ಅಭಿವೃದ್ಧಿಗೆ ಸುಮಾರು ೫೦ ಕೋಟಿಗಳಿಗೂ ಹೆಚ್ಚು ಹಣವನ್ನು ಮೀಸಲಿಟ್ಟು ಶಾಸಕ ಪ್ರೀತಮ್ಗೌಡರ ಒತ್ತಾಸೆಯಂತೆ ಮಹಾರಾಜ ಪಾರ್ಕಿನ ಅಭಿವೃದ್ಧಿಗೆ ಚಾಲನೆ ಸಿಕ್ಕಿತು.
ಆದರೆ ಪಾರ್ಕಿನ ಅಭಿವೃದ್ಧಿಗೂ ಕೆಲ ಬುದ್ದಿ ಜೀವಿಗಳು, ಕೆಲ ರಾಜಕೀಯ ಮುಖಂಡರುಗಳು ಅಡ್ಡಿಪಡಿಸಿದರು. ಕೆಲವು ಪ್ರತಿಭಟನೆಗಳು ಸಹ ನಡೆದವು. ಈ ಅಡ್ಡಿ ಆತಂಕಗಳ ನಡುವೆಯೂ ಪಾರ್ಕಿನ ಅಭಿವೃದ್ಧಿಗೆ ಚಾಲನೆ ಸಿಕ್ಕಿತು. ನಗರಸಭೆ ಬಜೆಟ್ ಮೇಲಿನ ಚರ್ಚೆಯಲ್ಲಿ ನಗರಸಭಾ ಅಧ್ಯಕ್ಷ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಚರ್ಚೆಯಲ್ಲಿ ಪತ್ರಕರ್ತ ಶಿವಕುಮಾರ್ ಪಾರ್ಕಿನ ಅಭಿವೃದ್ಧಿ ಬೆಂಬಲಿಸಿ ಯಾರಾದರೂ ಮಹಾರಾಜ ಪಾರ್ಕಿನ ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಹಾಸನ ಪ್ರಭ ಪತ್ರಿಕಾ ಬಳಗದವತಿಯಿಂದ ಬುದ್ದಿಜೀವಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಜೆಟ್ ಮೇಲಿನ ಚರ್ಚೆಯ ಸಭೆಯಲ್ಲಿ ಎಚ್ಚರಿಕೆ ನೀಡಿದದ್ದರು.
ಇದೀಗ ಮಹಾರಾಜ ಪಾರ್ಕ್ ಅಭಿವೃದ್ಧಿಗೆ ವೇಗ ಸಿಕ್ಕಿದೆ. ಹಾಸನ ಕ್ಷೇತ್ರದ ಜನತೆಯ ನಾಡಿ ಮಿಡಿತ ಅರಿತಿರುವ ಶಾಸಕ ಪ್ರೀತಮ್ಗೌಡ, ಮಹಾರಾಜ ಪಾರ್ಕ್ನ್ನು ಬೆಂಗಳೂರಿನ ಕಬ್ಬನ್ ಪಾರ್ಕಿಗೆ ಸರಿಸಮಾನವಾಗಿ ಅಭಿವೃದ್ಧಿಸುವ ಯೋಚನೆ ಹೊಂದಿದ್ದಾರೆ ಎನ್ನಲಾಗಿದೆ. ಅದರಂತೆ ಮಹಾರಾಜ ಪಾರ್ಕಿನಲ್ಲಿ ಸಾರ್ವಜನಿಕರು ವಾಕ್ ಮಾಡಲು ಸುಸಜ್ಜಿತವಾದ ವಾಕಿಂಗ್ ಪಾಥ್ ನಿರ್ಮಿಸಲಾಗುತ್ತಿದೆ. ಪಾರ್ಕಿನಲ್ಲಿ ಮಧ್ಯ ವಯಸ್ಕರಿಗಾಗಿ ಓಪನ್ ಜಿಮ್ ಉಪಕರಣವನ್ನು ಅಳವಡಿಸಲಾಗಿದೆ. ಅದು ಈಗಾಗಲೇ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುತ್ತಿದೆ.
ಮಹಾರಾಜ ಪಾರ್ಕಿನಲ್ಲಿ ಸುಂದರವಾದ ಅಲಂಕಾರಿಕ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಪಾರ್ಕಿನಲ್ಲಿ ಗಿಡ, ಮರಗಳಿಗೆ ಸುಮಾರು ೫೦ ವರ್ಷದಿಂದ ಮಣ್ಣನ್ನು ಹಾಕಿರಲಿಲ್ಲ. ಉದ್ಯಾನದಲ್ಲಿರುವ ಗಿಡ, ಮರಗಳಿಗೆ ಗುಣಮಟ್ಟದ ಕೆಬ್ಬೆ ಮಣ್ಣನ್ನು ಹಾಕಲಾಗುತ್ತಿದೆ. ಸುಮಾರು ೧೫.೦೦ ಎಕರೆ ಆವೃತ್ತಿ ಹೊಂದಿರುವ ಮಹಾರಾಜ ಪಾರ್ಕಿನಲ್ಲಿ ಒಂದೇ ಒಂದು ಸುಸಜ್ಜಿತವಾದ ಶೌಚಾಲಯ ಇರಲಿಲ್ಲ. ಇದನ್ನು ಅರಿತ ಪ್ರೀತಮ್ಗೌಡರು ಪಾರ್ಕಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಒತ್ತು ಕೊಟ್ಟು ಶೌಚಾಲಯಗಳು ನಿರ್ಮಾಣವಾಗುತ್ತಿವೆ. ಮತ್ತು ಪ್ರಾಚೀನ ವಸ್ತುಸಂಗ್ರಹಾಲಯ ಕಟ್ಟಡವು ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಿ ಹೊಸ ಕಟ್ಟಡಕ್ಕೆ ಚಾಲನೆಕೊಟ್ಟರು ಪ್ರೀತಮ್ಗೌಡ.
ಹೇಮಾವತಿ ಪ್ರತಿಮೆಯ ಬಳಿ ಸುಂದರವಾದ ಸ್ವಾಗತ ಕಮಾನಿನ ನಿರ್ಮಾಣ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ. ಇದನ್ನು ಸಹ ಸ್ಮರಿಸಬಹುದು. ಏನಾದರು ಆಗಲಿ ಮಹಾರಾಜ ಪಾರ್ಕ್ ಬೆಂಗಳೂರಿನ ಕಬ್ಬನ್ ಪಾರ್ಕಿಗೆ ಸರಿಸಮಾನವಾಗಿ ಅಭಿವೃದ್ಧಿ ಆಗುತ್ತದೆ. ಈ ಬೆಳವಣಿಗೆಯಿಂದ ಹಾಸನ ಕ್ಷೇತ್ರದ ಶಾಸಕ ಜನತೆಯ ಶಹಬಾಸ್ಗಿರಿ ಪಡೆದಿದ್ದಾರೆ.