ಹಾಸನ: ಐಐಟಿ ಸ್ಥಾಪನೆಗೆ ಮೀಸಲಿರಿಸಿರುವ ಜಾಗವನ್ನು ಕೈಗಾರಿಕಾ ಅಭಿವೃದ್ಧಿ ಹಾಗೂ ವಸತಿ ಉದ್ದೇಶಗಳಿಗೆ ಬಳಸಲಾಗುವುದು ಎಂದು ಶಾಸಕ ಪ್ರೀತಂ ಜೆ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐಐಟಿ ಸ್ಥಾಪನೆ ಮಾಡಲು ಕೇವಲ ೨೬೦ ಎಕರೆ ಜಾಗ ಸಾಕಾಗಲಿದ್ದು ೧೦೨೪ ಎಕರೆ ವಶಪಡಿಸಿಕೊಂಡಿ ರುವುದು ಸರಿಯಲ್ಲ..!! ಮಾಜಿ ಪ್ರಧಾನಿ ದೇವೇಗೌಡರ ಕನಸನ್ನು ನನಸು ಮಾಡುವ ಉದ್ದೇಶ ನನಗೂ ಇದೆ ಆದರೆ ಕೋಟ್ಯಾಂತರರೂ ಬೆಲೆಬಾಳುವ ಜಮೀನನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದರು.
ಐಐಟಿ ಸ್ಥಾಪನೆ ಮಾಡಿದರೆ ಜಿಲ್ಲೆಗೆ ಹೆಮ್ಮೆ ಆದರೆ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ ಐಐಟಿ ಬದಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದರೆ ಜಿಲ್ಲೆಯ ಪದವೀಧರರು, ಡಿಪ್ಲೋಮೋ, ಐಟಿಐ ಮುಗಿಸಿರುವ ಜಿಲ್ಲೆಯ ಸುಮಾರು ೧೦,೦೦೦ ಯುವಕರಿಗೆ ಉದ್ಯೋಗ ಒದಗಿಸಬಹುದಾಗಿದೆ ಎಂದು ಸಮರ್ಥಿಸಿಕೊಂಡರು.
ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಐಐಟಿ ಸ್ಥಾಪನೆ ಮಾಡುವುದಾದರೆ ಹೊಳೆನರಸೀಪುರದಲ್ಲಿ ಮಾಡಲಿ, ಈ ಹಿಂದೆ ವೆಟರ್ನರಿ ಕಾಲೇಜನ್ನು ಸ್ಥಾಪನೆ ಮಾಡಲು ನನ್ನ ಕ್ಷೇತ್ರದ ನೂರಾರು ಎಕರೆಯನ್ನು ವಶಪಡಿಸಿಕೊಂಡರು ಕೋಟ್ಯಾಂತರರು ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ಈಗ ಯಾವ ಸ್ಥಿತಿಯಲ್ಲಿದೆ ಎಂದು ನೀವು ಗಮನಿಸಬ ಹುದಾಗಿದೆ.
ಇದೀಗ ಐಐಟಿ ಗಾಗಿ ಗುರುತಿಸಲಾಗಿರುವ ಭೂಮಿಯಲ್ಲಿ ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ವಸತಿ ಉದ್ದೇಶಗಳಿಗೆ ಬಳಸಲಾಗುತ್ತಿದ್ದು ಕೃಷ್ಣ ಲೇಔಟ್ ರೀತಿಯಲ್ಲಿಯೇ ನಿವೇಶನ ನಿರ್ಮಾಣ ಹಾಗೂ ರೈತರಿಗೆ ಅಗತ್ಯ ಪರಿಹಾರ, ನಿವೇಶನಗಳನ್ನು ಒದಗಿಸಲಾಗುವುದು ಎಂದು ಪ್ರೀತಂ ಗೌಡ ಭರವಸೆ ನೀಡಿದರು.