ಗುಜರಾತ್: ಕಾಂಗ್ರೆಸ್ನ ಆಸ್ತಿ ಮರುಹಂಚಿಕೆ ವಿಚಾರವನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ಸುಳ್ಳುಗಾರನೆಂದು ಕರೆದಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ತಾನು ಈ ಮುಂಚೆ, ತಂದೆ ರಾಜೀವ್ ಗಾಂಧಿ ಸೇರಿದಂತೆ ಹಲವು ಪ್ರಧಾನಿಗಳನ್ನು ಕಂಡಿದ್ದೇನೆ ಎಂದರು.
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಭರವಸೆ ನೀಡಿರುವ ಆಸ್ತಿ ಮರುಹಂಚಿಕೆ ವಿಚಾರವನ್ನು ಉಲ್ಲೇಖಿಸಿ ಮೋದಿ, ಇವರು ಮಹಿಳೆಯರ ಮಂಗಳಸೂತ್ರವನ್ನೂ ಬಿಡುವುದಿಲ್ಲ ಎಂದು ಆರೋಪಿಸಿದ್ದರು. ಇದನ್ನು ಮಲ್ಲಿಖಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪಕ್ಷ ಅಲ್ಲಗಳೆದಿದೆ.
ಗುಜರಾತಿನ ಧರಮ್ಪುರ್ ಗ್ರಾಮದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಯಾಂಕಾ, ʼನಮ್ಮ ಪರಿವಾರದವರೂ ಸೇರಿದಂತೆ ನಾನು ಈವರೆಗೆ ಹಲವು ಪ್ರಧಾನಿಗಳನ್ನು ನೋಡಿದ್ದೇನೆ. ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಪ್ರಧಾನಿಯಾಗಿದ್ದ ನನ್ನ ತಂದೆ ರಾಜೀವ್ ಗಾಂಧಿಯ ದೇಹವನ್ನು ನಾನು ತುಂಡುಗಳಲ್ಲಿ ಮನೆಗೆ ತಂದಿದ್ದೆʼ ಎಂದರು.
ಮುಂದುವರೆದು ಮಾತನಾಡಿದ ಅವರು, ʼಮನಮೋಹನ್ ಸಿಂಗ್ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಕಾಂಗ್ರೆಸ್ ಪಕ್ಷದಿಂದ ಹೊರಗೆ ನೋಡಿದರೆ ಅಟಲ್ ಬಿಹಾರಿ ವಾಜ್ಪೇಯಿ ಸಭ್ಯರಾಗಿದ್ದರು. ಜನರೆದುರು ಸುಳ್ಳು ಹೇಳುವ ಮೊದಲ ಪ್ರಧಾನಿಯನ್ನು ನಾನೀಗ ನೋಡುತ್ತಿದ್ದೇನೆʼ ಎಂದು ಮೋದಿಯನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಎಕ್ಸರೇ ಯಂತ್ರಗಳ ಮೂಲಕ ಸ್ಕ್ಯಾನ್ ಮಾಡಿ ಮಂಗಳಸೂತ್ರ ಸೇರಿದಂತೆ ನಿಮ್ಮೆಲ್ಲಾ ಒಡವೆಗಳನ್ನು ಕಾಂಗ್ರೆಸ್ ಕಸಿದು ಹಂಚುತ್ತದೆ ಎಂಬ ಮೋದಿ ಹೇಳಿಕೆಗೆ ಪ್ರಿಯಾಂಕಾ ಈರೀತಿ ಪ್ರತಿಕ್ರಿಯಿದ್ದಾರೆ.