ಹಾಸನ: ಕಳೆದ ಬಾರಿಗೆ ಹೋಲಿಸಿದರೆ, ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ ೫ ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ.
ಕೃಷಿ ಇಲಾಖೆಯು ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ೧೧೪.೨ ಸೇಂ.ಮೀ.ನಷ್ಟಿದ್ದು, ಜನವರಿಯಿಂದ ಮೇ ಅಂತ್ಯದವರೆಗೆ ೧೬.೮ ಸೆಂ.ಮೀ. ವಾಡಿಕೆ ಮಳೆ ಇದೆ. ಆದರೆ, ಈ ವರ್ಷ ೧೭.೭ ಸೆಂ.ಮೀ. ಮಳೆಯಾಗಿದ್ದು, ಶೇ ೫ ರಷ್ಟು ಅಧಿಕ ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ತಂಬಾಕು, ಭತ್ತ, ರಾಗಿ ಮುಸುಕಿನ ಜೋಳದ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.
ಕೃಷಿಕರೂ ಈಗಾಗಲೇ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಕೊಳವೆಬಾವಿ ನೀರು ಹೊಂದಿರುವ ಕೆಲವರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಆದರೆ, ಇನ್ನೂ ಕೆಲವರು ಮಳೆಯನ್ನೇ ಅವಲಂಬಿಸಿದ್ದು, ಮಳೆಯನ್ನು ಆಧರಿಸಿ, ಬಿತ್ತನೆಗೆ ಚಿಂತನೆ ನಡೆಸಿದ್ದಾರೆ.
ಜಿಲ್ಲೆಯ ಬೆಳೆ ಪದ್ಧತಿ ಆಧರಿಸಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ೩೭,೬೮೫ ಟನ್ ರಸಗೊಬ್ಬರ ಬೇಡಿಕೆಯಿದ್ದು, ಬೇಡಿಕೆಯಂತೆ ರಸಗೊಬ್ಬರ ಸರಬರಾಜಾಗಿ ೩೪,೭೬೧ ಟನ್ ರಸಗೊಬ್ಬರ ವಿತರಣೆಯಾಗಿದೆ. ಪ್ರಸ್ತುತ ಯೂರಿಯಾ ೧೧,೩೫೯ ಟನ್, ಡಿ.ಎ.ಪಿ ೬,೧೧೭ ಟನ್, ಎಂ.ಒ.ಪಿ. ೨,೦೪೨ ಟನ್, ಎನ್.ಪಿ.ಕೆ. ಕಾಂಪ್ಲೆಕ್ಸ್ ೨೦,೯೪೨ ಟನ್, ಎಸ್.ಎಸ್.ಪಿ. ೧,೦೨೩ ಟನ್ ಸೇರಿದಂತೆ ಒಟ್ಟಾರೆ ೪೧,೪೮೧ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಶಂಕರಪ್ಪ, ರೈತಈ ಬಾರಿ ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಚುರುಕಾಗಿಲ್ಲ. ನೀರಾವರಿ ಸೌಲಭ್ಯ ಇರುವ ಕೆಲವರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯತಿ ದರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಸಾಮಾನ್ಯ ವರ್ಗದ ರೈತರಿಗೆ ಶೇ ೫೦ ರ ರಿಯಾಯತಿ ದರದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ ೭೫ ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.
ಡಾ. ರಾಜಸುಲೋಚನಾ ಎಂ.ಎನ್., ಜಂಟಿ ಕೃಷಿ ನಿರ್ದೇಶಕಿರೈತ ಸಂಪರ್ಕ ಕೇಂದ್ರಗಳಲ್ಲಿ ಕೋಡ್ ಕ್ಯೂಆರ್ ಕೋಡ್ ಗೂಗಲ್ ಪೇ ಫೋನ್ಪೇ ಮೂಲಕ ರೈತರು ರೈತರ ವಂತಿಕೆ ಪಾವತಿಸಬಹುದಾಗಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ೨,೪೧೬ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್ ಮತ್ತು ಎಫ್ಐಡಿ ದಾಖಲಾತಿಗಳನ್ನು ನೀಡಿ ಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ. ಬಿತ್ತನೆ ಬೀಜ ಹಾಗೂ ಇತರೆ ಕೃಷಿ ಪರಿಕರಗಳನ್ನು ಕ್ಯೂಆರ್ ಕೋಡ್ ಅಳವಡಿಸುವ ಮೂಲಕ ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೈಕೊಟ್ಟ ಮುಂಗಾರು ಮಳೆ
ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷ ೯೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದ ಮೆಕ್ಕೆ ಜೋಳ, ಈ ವರ್ಷ ಮಳೆ ಕೊರತೆಯಿಂದ ಶೇಕಡಾ ೫೦ ರಷ್ಟೂ ಬಿತ್ತನೆ ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲ ಮಳೆ ನಂಬಿ ಬಿತ್ತಿದ ಬೆಳೆ ಕೂಡ ಮಳೆಯಿಲ್ಲದೆ ನಾಶವಾಗೋ ಆತಂಕ ಎದುರಾಗಿದೆ.
ಕೆಲವೆಡೆ ಮಳೆಯಿಲ್ಲದೆ ಭೂಮಿಯೊಳಗೇ ಮೆಕ್ಕೆಜೋಳ ಒಣಗಿ ಹೋಗ್ತಿವೆ. ಮಳೆಯ ಮೇಲಾಟದಿಂದ ವರ್ಷದಿಂದ ವರ್ಷಕ್ಕೆ ಆಲೂಗಡ್ಡೆ ಬೆಳೆ ಕುಂಠಿತವಾಗ್ತಿದೆ. ೨೦೨೧-೨೨ ರ ಅವಧಿಯಲ್ಲಿ ೧೨,೫೦೦ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ಕಳೆದ ವರ್ಷ ೬೫೦೦ ಹೆಕ್ಟೇರ್ಗೆ ಆಲೂಗಡ್ಡೆ ಬಿತ್ತನೆ ಕುಸಿದಿದೆ. ಈ ವರ್ಷ ಈ ಪ್ರಮಾಣ ಮತ್ತಷ್ಟು ಕುಸಿಯೋ ಆತಂಕ ಇದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಆಲೂಗಡ್ಡೆ ಬೆಳೆಯನ್ನೇ ರೈತರು ಕೈ ಬಿಡುತ್ತಿದ್ದಾರೆ.