ಕಾರವಾರ: ಶಕ್ತಿ ಯೋಜನೆಯನ್ನು ಮಾದರಿಯನ್ನಾಗಿಸಿಕೊಂಡು ದೇಶದಾದ್ಯಂತ ಯೋಜನೆ ಜಾರಿಗೆ ತರಲು ಪ್ರಧಾನಿ ಮೋದಿಗೆ ಮುಂದಾಗಬೇಕು ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಘೋಷಣೆ ಮಾಡಲಾಗಿದ್ದ ಐದು ಗ್ಯಾರಂಟಿಯಂತೆ ಮೊದಲನೆಯದಾಗಿ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಸಾಮಾನ್ಯ ಜನರಿಗೆ, ಬಡ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರಂಭಿಸಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ಪೂರ್ವ ನುಡಿದಂತೆ ಇದೀಗ ನಡೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಬಸ್ ಕೊರತೆಯಾಗಿರುವುದು ನಾವು ಮಾಡಿದ್ದಲ್ಲ.
ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದು ನಾವು ಅದನ್ನು ಇದೀಗ ಸರಿಪಡಿಸುವ ಕೆಲಸ ಮಾಡುತ್ತೇವೆ. ಕೆಎಸ್ ಆರ್ ಟಿಸಿ ನಷ್ಟದಲ್ಲಿದ್ದರೇ ನಾವು ಅವರಿಗೆ ಈ ಯೋಜನೆ ಮೂಲಕ ಹಣ ನೀಡಿ ಅವರನ್ನು ಮೇಲಕ್ಕೆ ತರುವ ಪ್ರಯತ್ನ ಮಾಡುತ್ತೇವೆ. ಸಿಬ್ಬಂದಿ ಕೊರತೆ ನಮ್ಮ ಅವಧಿಯದ್ದಲ್ಲ. ಕೊರತೆ ನಿಗಿಸಲು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಅಂತರಾಜ್ಯ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡದ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ನೀವು ಹೇಳಬೇಕು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾದರಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದಂತೆ ಅದನ್ನು ದೇಶದಾದ್ಯಂತ ಜಾರಿ ಮಾಡಲು ನೀವು ಒತ್ತಾಯ ಮಾಡಬೇಕು ಎಂದರು.