ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ ಹಿನ್ನಲೆಯಲ್ಲಿ ಒಂಭತ್ತು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ.
ಸಕಲೇಶಪುರ, ಬೇಲೂರು, ಆಲೂರು ಭಾಗಗಳಲ್ಲಿ ೩೦ ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ವಾಸಿಸುತ್ತಿದ್ದು, ರಸ್ತೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರು, ವಾಹನ ಸವಾರರಿಗೆ ಆತಂಕ ಉಂಟು ಮಾಡುತ್ತಿವೆ. ಅಲ್ಲದೇ ಕಾಫಿ ತೋಟ, ಹೊಲ, ಗದ್ದೆಗಳಲ್ಲಿ ದಾಂಧಲೆ ನಡೆಸಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಇವುಗಳ ಜೊತೆಗೆ ಕೊಡಗು ಭಾಗದಿಂದ ಸಕಲೇಶಪುರ ತಾಲ್ಲೂಕಿಗೆ ಅಟ್ಯಾಕಿಂಗ್ ಎಲಿಫೆಂಟ್ ಸ್ಟಾಲಿನ್ ಬಂದಿದ್ದು, ಒಂಟಿಸಲಗ ಓಡಾಟದಿಂದ ಜನರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಾಸನ, ಚಿಕ್ಕಮಗಳೂರು ಜಿಲ್ಲೆಯ ಶಾಸಕರ ನಿಯೋಗ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ, ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು.
ನಿಯೋಗದ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವರು, ಸಕಲೇಶಪುರ, ಯಸಳೂರು, ಆಲೂರು, ಅರಕಲಗೂಡು, ಬೇಲೂರು ವಲಯಗಳಲ್ಲಿ ಜನರಿಗೆ ಉಪಟಳ ನೀಡುತ್ತಿರುವ ಒಂಭತ್ತು ಆನೆಗಳನ್ನು ಸೆರೆಹಿಡಿದು, ರೇಡಿಯೋ ಕಾಲರ್ ಅಳವಡಿಸಿ ಪುನಃ ಕಾಡಿಗೆ ಬಿಡಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಮುಖ್ಯ ವನ್ಯಜೀವಿ ಪರಿಪಾಲನೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣೆ ಅಧಿಕಾರಿ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಮೂರ್ನಾಲ್ಕು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಜೊತೆಗೆ ವೋಲ್ಡ್ ಮಕ್ನಾ ಎಂಬ ಆನೆಯನ್ನು ಸೆರೆಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ರವಾನಿಸಲಾಗಿತ್ತು.