ಬೇಲೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸ್ಕ್ಯಾನಿಂಗ್ ಮಿಷನ್ ಸರಬರಾಜು ಆಗಿ ಮೂರು ವರ್ಷಗಳು ಕಳೆದಿದ್ದರೂ ಇದುವರೆಗೂ ಅದು ಬಳಕೆಯಾಗದ ಕುರಿತಂತೆ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎನ್.ಶಿವಸ್ವಾಮಿ ಹಾಗೂ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಹೆಚ್.ಸಿ.ಚೇತನ್ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿನ ಸ್ಕಾನಿಂಗ್ ಯಂತ್ರ ಸರಬರಾಜು ಆಗಿ 3 ವರ್ಷವಾಗಿದ್ದು ಇದುವರೆಗೆ ಅದರ ಬಳಕೆಯಾಗಿಲ್ಲ, ಹೊರಗುತ್ತಿಗೆ ನೌಕರರ ಭವಿಷ್ಯನಿಧಿ ಹಣ 6.11 ಸಾವಿರ ರೂ. ಕಟ್ಟದೆ ಅವ್ಯವಹಾರ ನಡೆಸಲಾಗಿದೆ ಎಂದು ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಚಂದ್ರಶೇಖರ್ ನೇತೃತ್ವದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗಿತ್ತು.
ಹೀಗಾಗಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ವೇಳೆ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಕರವೇ ಪ್ರಮುಖರು ಬಿಡಿಬಿಡಿಯಾಗಿ ಮಾಹಿತಿ ನೀಡಿದರು. ಸ್ಕ್ಯಾನಿಂಗ್ ಯಂತ್ರಕ್ಕೆ ಸೂಕ್ತ ತಜ್ಞರಿಲ್ಲದೆ ಬಳಕೆ ಆಗುತ್ತಿಲ್ಲ. ಇದರಿಂದ ರೋಗಿಗಳು ಹೊರಗಡೆ ಹೆಚ್ಚು ಹಣ ನೀಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಡವರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ. ಆಸ್ಪತ್ರೆಯಲ್ಲಿನ ಔಷಧಿಯಂಗಡಿಯಲ್ಲಿ ಮಾತ್ರೆ, ಔಷಧಿಗಳಿದ್ದರೂ ಹೊರಗಡೆಗೆ ಚೀಟಿ ಬರೆದುಕೊಡುವ ಪರಿಪಾಠ ನಡೆಯುತ್ತಿದೆ. ಆಸ್ಪತ್ರೆಯ ಹೊರಗುತ್ತಿಗೆ ನೌಕರರಿಗೆ ಕಳೆದ ಏಪ್ರಿಲ್ ತಿಂಗಳಿನಿಂದ ವೇತನದ ಪಿಎಫ್ ಹಣ 6.11 ಸಾವಿರ ರೂ. ಕಟ್ಟದೆ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದರು.
ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯ ಸಿಬ್ಬಂದಿಗೆ ರಕ್ಷಣೆ ಇಲ್ಲವಾಗಿದೆ. ಆಸ್ಪತ್ರೆ ಮುಂಭಾಗ ಒಳ ಪ್ರಾಂಗಣದಲ್ಲಿ ಖಾಸಗಿ ವ್ಯಕ್ತಿಗಳ ದ್ವಿಚಕ್ರ ವಾಹನ ನಿಲುಗಡೆಯಿಂದ ರೋಗಿಗಳ ವಾಹನಗಳಿಗೆ ತೊಂದರೆಯಾಗಿದೆ. ಕೆಲ ವೈದ್ಯರು ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿ ಇರುವುದೇ ಇಲ್ಲ. ಆಂಬ್ಯುಲೆನ್ಸ್ ಬದಲು ಕಾರಿನಲ್ಲಿ ರೋಗಿಗಳನ್ನು ಹಾಸನ, ಚಿಕ್ಕಮಗಳೂರಿಗೆ ಕಳುಹಿಸಿಕೊಡುವ ಪರಿಸ್ಥಿತಿ ಬಂದಿದೆ. ಆಂಬ್ಯುಲೆನ್ಸ್ ಗೆ ಡೀಸೆಲ್ ಸಮಸ್ಯೆ ಇದೆ. ಲ್ಯಾಬ್ನಲ್ಲಿ ರಕ್ತಪರೀಕ್ಷೆ ಮಾಡದ ಹೊರಗಡೆಗೆ ಬರೆದುಕೊಡುವ ಪದ್ಧತಿಯಿದೆ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಡಿಹೆಚ್ಒ ಬಿ.ಎನ್.ಶಿವಸ್ವಾಮಿ ಹಾಗೂ ಡಾ.ಚೇತನ್, ಎಲ್ಲ ಸಮಸ್ಯೆ ಗಮನಕ್ಕೆ ಬಂದಿದೆ. ಸ್ಕ್ಯಾನಿಂಗ್ ಯಂತ್ರ ಬಳಕೆಗೆ ಸೂಕ್ತ ತಜ್ಞರ ಕೊರತೆಯಿದ್ದು ಪ್ರಸೂತಿ ವೈದ್ಯರಿಗೆ ತರಬೇತಿ ನೀಡಿ ಯಂತ್ರದ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಒಂದು ತಿಂಗಳೊಳಗೆ ಎಲ್ಲ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕರವೇ ಅಧ್ಯಕ್ಷರು ನೀಡಿದ್ದಾರೆ.