ಹಾಸನ: ೬೭ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ, ಉತ್ಸಾಹದಿಂದ ನಾಡಿನಾದ್ಯಂತ ಆಚರಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಟಿ ಕಂಠ ಗಾಯನವನ್ನು ಅ.28ರ ಶುಕ್ರವಾರ ಬೆಳಗ್ಗೆ ೧೧ಗಂಟೆಗೆ ನಾಡಿನಾದ್ಯಂತ ಆಯೋಜಿಸಲಾಗಿದೆ.
ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ, ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು, ಇವುಗಳ ಕೇಳುವಿಕೆಯು ನಮ್ಮಲ್ಲಿ ಅಭಿಮಾನವನ್ನು ಮೂಡಿಸುತ್ತದೆ. ಕಳೆದ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಾತಿನಿಧಿಕವಾಗಿ ಆಯ್ದ ೩ ಕನ್ನಡ ಗೀತಗಳ ಸಮೂಹ ಗಾಯನವನ್ನು ವಿನೂತನವಾಗಿ ಲಕ್ಷ ಕಂಠ ಗೀತ ಗಾಯನ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ಆಯೋಜಿಸಿ ಯಶಸ್ವಿಗೊಂಡ ನಿಟ್ಟಿನಲ್ಲಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ನನ್ನ ಹಾಡು – ನನ್ನ ನಾಡು ಎಂಬ ಶೀರ್ಷಿಕೆಯಡಿ ನಾಡಗೀತೆ ಶ್ರೀ ಕುವೆಂಪು ವಿರಚಿತ ಜಯಭಾರತ ಜನನಿಯ ತನುಜಾತೆ ಸೇರಿ ಒಟ್ಟು ಆರು ಆಯ್ದ ಕನ್ನಡ ಗೀತೆಗಳನ್ನು ಒಂದು ಕೋಟಿಗೂ ಹೆಚ್ಚು ಜನ ಏಕಕಾಲದಲ್ಲಿ ಏಕಕಂಠದಲ್ಲಿ ಹಾಡಲು ಯೋಜಿಸಲಾಗಿದೆ.
ಕೋಟಿ ಕಂಠ ಗೀತ ಗಾಯನಕ್ಕೆ ನೋಂದಣಿ:
ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ನೋಂದಾಯಿಸಲು, ಭಾಗವಹಿಸಿದವರಿಗೆ ಸ್ವಯಂಚಾಲಿತ ಆನ್ಲೈನ್ ಪ್ರಮಾಣಪತ್ರ ನೀಡಲು ಉದ್ದೇಶಿಸಿದ್ದು, ಅದರ ಅಂಗವಾಗಿ ಅ.೨೮ರವರೆಗೆ ನೋಂದಣಿ ಅಭಿಯಾನ ಮಾಡಲು ಯೋಜಿಸಲಾಗಿದೆ.