ಬೇಲೂರು: ವಿಶ್ವ ಪ್ರಸಿದ್ದ ಪ್ರವಾಸಿ ತಾಣವಾದ ಬೇಲೂರಿನಲ್ಲಿ ಸೆಪ್ಟೆಂಬರ್ 25 ರಿಂದ ಆಕ್ಟೋಬರ್ 5 ತನಕ ಸತತ 9 ದಿನ ನಡೆಯುವ ರಂಭಾಪುರಿ ಪೀಠದ ದಸರಾ ದರ್ಬಾರ್ ಕಾರ್ಯಕ್ರಮಕ್ಕೆ ಸರ್ವ ಧರ್ಮಕ್ಕೂ ಮುಕ್ತವಾದ ಆಹ್ವಾನ ನೀಡಲಾಗಿದೆ.
ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಹಾಗೂ ಕಾರ್ಯಾಧ್ಯಕ್ಷ ಕೊರಟಿಕೆರೆ ಪ್ರಕಾಶ್ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪ್ರಾಚೀನ ಭವ್ಯ ಪರಂಪರೆಯ ಇತಿಹಾಸವನ್ನು ಹೊಂದಿರುವ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠವು ಪಂಚಪೀಠಗಳಲ್ಲಿ ಒಂದಾದ ಪೀಠವು ಅಂದಿನಿಂದ ಇಂದಿನ ತನಕ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷವಾಕ್ಯದಿಂದಲೇ ಭಕ್ತರಿಗೆ ಸಂಸ್ಕಾರ-ಸಂಸ್ಕೃತಿ ನೀಡುವ ಪೀಠದಲ್ಲಿ ಪ್ರತಿ ವರ್ಷ ರಾಜ್ಯದ ವಿವಿಧಡೆ ರಂಭಾಪುರಿ ಪೀಠದಿಂದ ಶರನ್ನವರಾತ್ರಿ ದಸರಾ ದರ್ಬಾರ್ ಮಹೋತ್ಸವ ಆಚರಣೆ ನಡೆಸುತ್ತಾ ಬರಲಾಗಿದೆ ಎಂದರು.
ಕಳೆದ ಎರಡು ವರ್ಷದ ಕೋವಿಡ್ ಬಳಿಕ ಬೇಲೂರಿನಲ್ಲಿ ದಸರಾ ದರ್ಬಾರ್ ಆಚರಣೆಗೆ ಶ್ರೀಗಳು ಒಪ್ಪಿಗೆ ನೀಡಿದ ಬಳಿಕ ಮಹೋತ್ಸವಕ್ಕೆ ಈಗಾಗಲೇ ಸಮಿತಿ ಒಳಗೊಂಡಂತೆ ಸಕಲ ಸಿದ್ದತೆ ನಡೆಸಲಾಗಿದೆ. ಸೆಪ್ಟೆಂಬರ್ 25 ರಿಂದ ಆಕ್ಟೋಬರ್ 5 ತನಕ ಸತತ 9ದಿನಗಳ ಕಾಲ ನಡೆಯುವ ಅದ್ದೂರಿ ಉತ್ಸವಕ್ಕೆ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಬೃಹತ್ ಮಂಟಪ ಹಾಕಲಾಗುತ್ತದೆ. ಪ್ರತಿ ದಿನ ಸಂಜೆ 5 ರಿಂದ ರಾತ್ರಿ 12 ಗಂಟೆಯ ತನಕ ನಡೆಯುವ ದಸರಾ ದರ್ಬಾರ್ ಕಾರ್ಯಕ್ರಮ ನಡೆಯಲಿದೆ.
ರಂಭಾಪುರಿ ಶ್ರೀಗಳು ಈಗಾಗಲೇ ಆ.2 ರಂದು ಆಗಮಿಸಿ ಇಲ್ಲಿನ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ್ದು, ಸದ್ಯ 2 ನೇ ಬಾರಿ ಅಂದರೆ ಆಗಸ್ಟ್ 26 ರಂದು ಬೇಲೂರಿಗೆ ಆಗಮಿಸುವ ದಿಸೆಯಲ್ಲಿ ಪೂಜ್ಯರ ಆದೇಶದೊಂದಿಗೆ ಸರ್ವ ಧರ್ಮಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ ಎಂದ ಅವರು 9ದಿನದ ಕಾರ್ಯಕ್ರಮದಲ್ಲಿ ಪೂಜ್ಯರ ಭವ್ಯ ಅಡ್ಡಪಲ್ಲಕ್ಕಿ ಉತ್ಸವವನ್ನು 25ಜನಪದ ಕಲಾತಂಡದೊಂದಿಗೆ ನಡೆಸಲು ಸಮಿತಿ ನಿರ್ಧರಿಸಲಾಗಿದೆ ಎಂದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಸಿ.ಎಂ.ನಿಂಗರಾಜ್, ಕಾರ್ಯದರ್ಶಿ ಅದ್ದೂರಿ ಚಂದ್ರಶೇಖರ್, ಸಮಿತಿ ಸದಸ್ಯರಾದ ಆಡಗೂರು ಆನಂದ್, ಅದ್ದೂರಿ ಚೇತನಕುಮಾರ್, ವೀರಶೈವ ರಾಜ್ಯ ಯುವ ಘಟಕದ ಕಾರ್ಯದರ್ಶಿ ವಿಕ್ರಮ್ ಕೌರಿ ಮೊದಲಾದವರಿದ್ದರು.