ಕಾರವಾರ: ತಾಲೂಕಿನ ಶಿರವಾಡ ಗ್ರಾಪಂಗೆ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಆತನ ಪತ್ನಿಯೇ ಅಧ್ಯಕ್ಷ ಸ್ಥಾನಕ್ಕೆರಿದ್ದಾರೆ. ಅಶ್ವಿನಿ ದಿಲೀಪ್ ಬಾಂದೇಕರ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷೆಯಾಗಿದ್ದಾರೆ.
ಒಟ್ಟೂ 14 ಸದಸ್ಯ ಬಲ ಇರುವ ಶಿರವಾಡ ಗ್ರಾಮ ಪಂಚಾಯಿತಿಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೇಲುಗೈ ಸಾಧಿಸಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದರಿಂದ ದಿಲೀಪ ನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇನ್ನೊಂದೆಡೆ ಅವರ ಪತ್ನಿ ಅಶ್ವಿನಿ ಬಾಂದೇಕರ ಅವರು ಕಾಂಗ್ರೆಸ್ ಬೆಂಬಲಿತರಾಗಿದ್ದರು ಅವರೂ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ನಡುವೆ ಇತ್ತೀಚೆಗೆ ಕಾಂಗ್ರೆಸ್ ಬೆಂಬಲಿತರೆಂಬ ಕಾರಣಕ್ಕೆ ಶಿರವಾಡ ಗ್ರಾಮ ಪಂಚಾಯಿತಿಗೆ ಯಾವುದೇ ರೀತಿಯ ಅನುದಾನವನ್ನು ಬಿಜೆಪಿ ಸರಕಾರ ನೀಡುತ್ತಿಲ್ಲ. ಸ್ಥಳೀಯ ಶಾಸಕರು ಪಂಚಾಯಿತಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಅಧ್ಯಕ್ಷ ದಿಲೀಪ ನಾಯ್ಕ ತನ್ನಿಂದಾಗಿ ಗ್ರಾಮದ ಅಭಿವೃದ್ಧಿ ಕುಂಠಿತವಾಗಬಾರದು ಎಂಬ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ನಡುವೆ ನಡೆದ ರಾಜಕೀಯ ವಿದ್ಯಮಾನದಲ್ಲಿ ದಿಲೀಪ ನಾಯ್ಕ ಅವರ ಪತ್ನಿ ಅಶ್ವಿನಿ ಬಾಂದೇಕರ ಅವರು ಬಿಜೆಪಿಯತ್ತ ಒಲವು ತೋರಿದ್ದರು. ಇದೀಗ ಬುಧವಾರ ಶಿರವಾಡ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದು ಕಾಂಗ್ರೆಸ್ ಬೆಂಬಲಿತ ಸಿದ್ಧಾರ್ಥ ನಾಯ್ಕ ಹಾಗೂ ಬಿಜೆಪಿ ಬೆಂಬಲಿತ ಅಶ್ವಿನಿ ಬಾಂದೇಕರ ಅವರ ನಡುವೆ ಚುನಾವಣೆ ನಡೆಯಿತು.
ಒಟ್ಟೂ 14 ಸದಸ್ಯರಲ್ಲಿ ಓರ್ವ ಸದಸ್ಯರು ಗೈರಾಗಿದ್ದು 13 ಮತಗಳು ಚಲಾವಣೆಯಾಗಿದೆ. ಈ ಪೈಕಿ ಅಶ್ವಿನಿ ಅವರಿಗೆ 8 ಹಾಗೂ ಸಿದ್ಧಾರ್ಥ ಅವರ ಪರವಾಗಿ 5ಮತಗಳು ಚಲಾವಣೆಯಾದವು. ಈ ಮೂಲಕ ಅಶ್ವಿನಿ ಬಾಂದೇಕರ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ತಮ್ಮ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಶಿರವಾಡ ಗ್ರಾಮ ಪಂಚಾಯತ್ ಬಿಜೆಪಿ ತೆಕ್ಕೆಗೆ ಜಾರಿದೆ.