ಆಲೂರು: ಹೇಮಾವತಿ ಜಲಾಶಯ ಸಂತಸ್ತರ ಹೋರಾಟ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಲೇಟಾಗಿ ಬಂದದಲ್ಲದೆ, ನಿರಾಸಕ್ತಿ ತೋರಿದ ತಹಸೀಲ್ದಾರ್ ಮೇಘನಾ ಜಿ. ವಿರುದ್ಧ ದಿಕ್ಕಾರ ಕೂಗಿ ಹೊರಗೆ ಬರದಂತೆ ದಿಗ್ಬಂಧನ ಹಾಕಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಆಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಿಂದ ಹೋರಾಟ ಪ್ರತಿಭಟನಾ ರ್ಯಾಲಿ ತಾಲ್ಲೂಕು ಕಚೇರಿಯ ಆವರಣದಲ್ಲಿ ಬೆಳಗ್ಗೆ ೧೧ ಗಂಟೆಗೆ ಪ್ರತಿಭಟನಾ ಹೋರಾಟ ಪ್ರಾರಂಭವಾಯಿತು. ಹೇಮಾವತಿ ಜಲಾಶಯ ಸಂತಸ್ತರ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಕೃಷ್ಣರವರು ಮಾತನಾಡಿ, ಗೊರೂರು ಹೇಮಾವತಿ ಜಲಾಶಯ ಮುಳುಗಡೆಯಾಗಿ ೫೦ ವರ್ಷ ಕಳೆದಿದ್ದರೂ ಸುಮಾರು ೧೦ ಸಾವಿರ ಕುಟುಂಬಗಳು ಸುಮಾರು ೫೦ ಸಾವಿರ ಜನರು ಜಮೀನು ದುರಸ್ಥಿ ಯಾಗದೆ ನೋವನ್ನು ಅನುಭವಿಸುತ್ತಿದ್ದಾರೆ.
ಬ್ಯಾಬಪಾರೆಸ್ಟ್ ನ ಸರ್ವೆ ನಂ ೧ ರಲ್ಲಿ ೩೦೬ ಕುಟುಂಬಗಳ ಪೈಕಿ ೫೯ ಜನರು ಮಾತ್ರ ಪೋಡಿ ಮಾಡಿಸಿದ್ದು, ೨೪೭ ಕುಟುಂಬಗಳಿಗೆ ಇನ್ನೂ ಪೋಡಿಯಾಗಿಲ್ಲ. ಮಂಜೂರಾತಿ ಪಡೆದ ಬಹಳಷ್ಟು ರೈತರು ಸಾವನ್ನಪ್ಪಿದ್ದಾರೆ.
ಮಣಿಪುರ, ಬ್ಯಾಬ, ಬ್ಯಾಬ ಫಾರೆಸ್ಟ್, ಧರ್ಮಪುರಿ, ಮಣಿಪುರ,ಬೈರಾಪುರ, ಸಿಂಗಾಪುರ,ಹಳುವಳ್ಳಿ, ಮಡಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬದಲಿ ಜಮೀನು ಪಡೆದಿದ್ದ ಸಂತ್ರಸ್ತ ರೈತರಿಗೆ ಈವರೆಗೂ ಪೋಡಿ ದುರಸ್ಥಿ ಮಾಡದ ಕಾರಣ, ತಂದೆಯಿಂದ ಮಕ್ಕಳಿಗೆ ಖಾತೆ ಮಾಡಲು, ಸರ್ಕಾರಿ ಸೌಲಭ್ಯ ಪಡೆಯಲು, ದಾರಿ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳಲ್ಲಿ ಸೋತಿರುವ ನಿರಾಶ್ರಿತ ರೈತರ ಭೂಮಿಯನ್ನು ಸರಿಪಡಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವುದೆ ಮುಖ್ಯ ಕಾರಣ, ಬಸವೇಶ್ವರ ಗ್ರಾಮದಲ್ಲಿ ೧೭-೦೨-೨೦೨೨ “ಡಿ.ಸಿ. ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದರು.