ಬೇಲೂರು: ಖಾಸಗಿ ವ್ಯಕ್ತಿಗಳಿಗೆ ಮತ್ತು ಪ್ರಸಿದ್ಧ ಚನ್ನಕೇಶವ ದೇಗುಲ ನಡುವೆ ಇದ್ದ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು ಅಂತಿಮವಾಗಿ ದೇಗುಲದ ಪರವಾಗಿ ತೀರ್ಪು ಬಂದ ಹಿನ್ನಲೆಯಲ್ಲಿ ಆಸ್ತಿಗೆ ದೇಗುಲದ ನಾಮಫಲಕ ಅಳವಡಿಸುವ ವೇಳೆ ಖಾಸಗಿ ವ್ಯಕ್ತಿಗಳು ಅಡ್ಡಿಪಡಿಸಿದ ಘಟನೆ ನಡೆದಿದ್ದು ಪೊಲೀಸರ ಮಧ್ಯಸ್ಥಿಕೆಯಲ್ಲಿ ನಾಮಫಲಕ ಅಳವಡಿಸಲಾಗಿದೆ.
ಬೇಲೂರು ಪಟ್ಟಣದ ದೇವಸ್ಥಾನ ರಸ್ತೆಯ ಗಣಪತಿ ದೇವಾಲಯದ ಸಮೀಪವಿರುವ ಚನ್ನಕೇಶವ ದೇವಾಲಯಕ್ಕೆ ಸೇರಿದ ಆಸ್ತಿಯ ಸ ನಂ 1/4 A ರಲ್ಲಿ 0- 36 ಕುಂಟೆ ಆಸ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳ ಹಿಂದೆ ಇಲ್ಲಿನ ಸಕಲೇಶಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ವ್ಯಕ್ತಿಗಳಿಗೂ ಹಾಗೂ ದೇವಾಲಯದ ಅಧಿಕಾರಿಗಳ ನಡುವೆ ವ್ಯಾಜ್ಯ ಏರ್ಪಟ್ಟು ಈ ಸಂಬಂಧ ವಿಚಾರಣೆ ನಡೆದಿದ್ದು ಅಂತಿಮವಾಗಿ ಉಪವಿಭಾಧಿಕಾರಿಗಳು ಶ್ರೀ ಚನ್ನಕೇಶವ ದೇವಾಲಯದ ಪರ ಆದೇಶ ನೀಡಿದ ಹಿನ್ನಲೆಯಲ್ಲಿ ಖಾಸಗಿ ವ್ಯಕ್ತಿಗಳು ಆ ತೀರ್ಪನ್ನು ಪ್ರಶ್ನಿಸಿ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಆ ನಂತರ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಖಾಸಗಿ ವ್ಯಕ್ತಿಗಳ ದೂರನ್ನು ತಿರಸ್ಕರಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ನೀಡಿದ ಆದೇಶದ ಹಿನ್ನೆಲೆಯಲ್ಲಿ ಇದುವರೆಗೂ ಇಬ್ಬರ ನಡುವೆ ನಡೆದ ವಿಚಾರಣೆಯಲ್ಲಿ ಅಂತಿಮವಾಗಿ ನ.14 ರಂದು ಶ್ರೀ ಚನ್ನಕೇಶವ ದೇವಾಲಯದ ಪರವಾಗಿ ಅಂತಿಮ ಆದೇಶ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೌಖಿಕ ಸೂಚನೆಯಂತೆ ಗುರುವಾರ ಮಧ್ಯಾಹ್ನ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ವಿದ್ಯುಲತಾ ಹಾಗೂ ಚನ್ನಕೇಶವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಾರಾಯಣಸ್ವಾಮಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಆಗಮಿಸಿ ಅತಿಕ್ರಮಣ ಪ್ರವೇಶ ನಿಷೇಧ ಎಂಬ ನಾಮಫಲಕ ಅಳವಡಿಸಲಾಯಿತು.
ಈ ವೇಳೆ ಇದೇ ಸ್ಥಳಕ್ಕೆ ಆಗಮಿಸಿದ ಈ ಆಸ್ತಿ ನಮ್ಮದು ಎಂದು ದಾವೆ ಹಾಕಿದ್ದ ಖಾಸಗಿ ವ್ಯಕ್ತಿಗಳ ಸಂಬಂಧಿಕರು ಸ್ಥಳಕ್ಕೆ ಬಂದು ನಾಮಫಲಕ ಅಳವಡಿಸದಂತೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಮಾತಿನ ಚಕಮಕಿ ನಡೆಯಿತು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪನಾ ಸಮಿತಿಯವರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇವಾಲಯದ ಪರವಿರುವ ಜಿಲ್ಲಾಧಿಕಾರಿಗಳ ಆದೇಶ ಗಮನಿಸಿ ನಾಮಫಲಕವನ್ನು ಯಾರು ತೆಗೆಯದಂತೆ ನಿಮ್ಮ ದಾಖಲಾತಿಗಳನ್ನು ಠಾಣೆಗೆ ತರುವಂತೆ ಸೂಚಿಸಿ ತೆರಳಿದ್ದಾರೆ.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಶಂಕರ್. ಮೋಹನ್ ಕುಮಾರ್. ರಂಗನಾಥ್. ಪ್ರಮೋದ್. ಸುಧಾ ರಮೇಶ್. ವಿಜಯಲಕ್ಷ್ಮಿ ಸೇರಿದಂತೆ ಹಲವರು ಇದ್ದರು.