ಎಚ್.ಡಿ.ಕೋಟೆ: ಕಾಡಿನಿಂದ ಗ್ರಾಮಗಳತ್ತ ಬಂದ ಕಾಡಾನೆ ನಾಡಿನ ಜನರಿಗೆ ಯಾವುದೇ ರೀತಿಯ ತೊಂದರೆ ನೀಡದೆ ಮರಳಿ ಕಾಡು ಸೇರಿದ ಘಟನೆ ನಡೆದಿದೆ.
ಮೊದಲಿಗೆ ಈ ಕಾಡಾನೆ ಎಚ್.ಡಿ.ಕೋಟೆ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ತಾಲ್ಲೂಕಿನ ಹಾರೋಪುರ ಗ್ರಾಮದ ಬಳಿ ಇರುವ ಕೆರೆ ಬಳಿ ಕಾಣಿಸಿಕೊಂಡಿದೆ, ಆ ನಂತರ ವಡ್ಡರಗುಡಿ ಗ್ರಾಮದ ಚನ್ನಪ್ಪಾಜಿ ಅವರ ತೆಂಗಿನ ತೋಟದಲ್ಲಿ ಬೀಡು ಬಿಟ್ಟಿತು.
ಅಷ್ಟರಲ್ಲೇ ಕಾಡಾನೆ ಇರುವ ವಿಚಾರ ತಿಳಿದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಓಡಿಸುವ ಕಾರ್ಯಾಚರಣೆ ಆರಂಭಿಸಿ, ಚೆನ್ನಪ್ಪಾಜಿ ಜಮೀನಿನಿಂದ ಆನೆಯನ್ನು ಓಡಿಸಿದ್ದು ಅದು ಬೆಳ್ತೂರು ಕಾಲೋನಿ ಕಡೆ ಮುಖ ಮಾಡಿ ಹೆಬ್ಬಳ್ಳ ಜಲಾಶಯದ ಹಿನ್ನೀರಿನಲ್ಲಿ ಕಾಣಿಸಿಕೊಂಡಿದೆ. ಬಳಿಕ ಅಲ್ಲಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹುಣಸೂರು ಎಚ್.ಡಿ.ಕೋಟೆ ಎರಡು ಬದಿಯಲ್ಲಿ ರಸ್ತೆ ಬಂದ್ ಮಾಡಿ ಆನೆ ರಸ್ತೆ ದಾಟಲು ಅವಕಾಶ ಮಾಡಿಕೊಟ್ಟರು.
ಅಲ್ಲಿಂದ ಬೋಚಿಕಟ್ಟೆ ಪಿಚ್ಚುಮುತ್ತ ತೋಟದ ಮನೆ ಹತ್ತಿರ ಸಾಗಿದ ಸಂದರ್ಭದಲ್ಲಿ, ಪಿಚ್ಚುಮುತ್ತು ಅವರ ಪತ್ನಿ ಮಳೆಯಾಮಾಳ್ ಅವರ ಬಳಿಯೇ ಆನೆಯು ಹೋದರೂ ಕೂಡ ಯಾವುದೇ ಅನಾಹುತ ಮಾಡಲಿಲ್ಲ. ನಂತರ ಮಹದೇವಪುರ, ಬೂದನೂರು ಮಾರ್ಗವಾಗಿ ತೆರಳಿದ ಆನೆ ಬೊಮ್ಮಲಪುರ ಹಾಡಿ ಮೂಲಕ ಅರಣ್ಯಕ್ಕೆ ಮಧ್ಯಾಹ್ನ 1 ಗಂಟೆ ವೇಳೆಗೆ ಓಡಿಸಲಾಯಿತು.
ಕಾಡಾನೆಯನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ಸಾಗಿ ಬಂದ ಮಾರ್ಗದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು, ಕಾಡಾನೆಯು ಸೌಮ್ಯವಾಗಿದ್ದ ಕಾರಣ ಸಾಗಿ ಬಂದ ದಾರಿಯ ನಡುವೆ ಜನರಿಗೆ, ಜಾನುವಾರುಗಳಿಗೆ ಯಾವುದೇ ತೊಂದರೆ ಮಾಡದೆ ಕಾಡು ಸೇರಿದೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ಲಕ್ಷ್ಮೀಕಾಂತ್, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳಾದ ಮಧು, ಹರ್ಷಿತ್, ನಂಜನಗೂಡು, ಸರಗೂರು, ಎಚ್.ಡಿ.ಕೋಟೆ, ವೀರನಹೊಸಹಳ್ಳಿ ಅರಣ್ಯ ವಲಯದ ಸಿಬ್ಬಂದಿ ಇದ್ದರು.