ಗುಂಡ್ಲುಪೇಟೆ: ಕಾವೇರಿ ನೀರಾವರಿ ನಿಗಮದ ಆಸ್ತಿಯನ್ನು ವ್ಯಕ್ತಿಯೊಬ್ಬರು ಕಬಳಿಸಲು ಮುಂದಾಗಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಘಟನೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ವೇ ನಂಬರ್ 39 ರಲ್ಲಿ 2 ಎಕರೆ ಹಾಗೂ 38/1 ರಲ್ಲಿ 13 ಗುಂಟೆ ಜಾಗವಿದ್ದು ಅದು ಕಾವೇರಿ ನೀರಾವರಿ ನಿಗಮದ ಆಸ್ತಿಯಾಗಿದೆ. ಆದರೆ ಅನಾಮಿಕ ವ್ಯಕ್ತಿಯೊಬ್ಬರು ಈ ಜಾಗದ ಜಮೀನಿನಲ್ಲಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಜಮೀನಿನ ಸುತ್ತಲೂ ಕಂದಕ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಮಾಹಿತಿ ಅರಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ
ಸ್ಥಳಕ್ಕೆ ಆಗಮಿಸಿದ ಸರ್ವೇಯರ್ ಗಣೇಶ್ ಅವರು ಅಳತೆ ಮಾಡಿ ಇದು ನಮ್ಮ ಇಲಾಖೆಗೆ ಸೇರಿದ ಆಸ್ತಿ ಎಂಬುದನ್ನು ಖಚಿತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮಂಡಲ ಉಪಾಧ್ಯಕ್ಷ ನಾಗೇಂದ್ರ, ಮಾತನಾಡಿ ವೀರನಪುರ ಹಾಗೂ ಮಾಡ್ರಹಳ್ಳಿ ಗ್ರಾಮದ ಸುತ್ತ ಮುತ್ತ 95 ಎಕರೆಗೂ ಅಧಿಕ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಆಸ್ತಿಗಳು ಒತ್ತುವರಿ ಮತ್ತು ಲೇಔಟ್ ಗಳ ಬಳಕೆದಾರರ ಕೈಗೆ ಸಿಕ್ಕಿದೆ ಅದನ್ನು ಬಿಡಿಸಿ ಅವರಿಗೆ ಇಲಾಖೆಯವರು ಕಾನೂನಿನ ಮೂಲಕ ಕ್ರಮ ಕೈಗೊಳ್ಳುವಂತೆ ಹೇಳಿದರು.
ಕಾವೇರಿ ನೀರಾವರಿ ನಿಗಮದ ಎಇ ಮಹೇಶ್ ಪ್ರತಿಕ್ರಿಯೆ ನೀಡಿ ನಮ್ಮ ಇಲಾಖೆಯಿಂದ ಪಟ್ಟಣದ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ ಹಾಗೂ ಇಲಾಖೆಯ ಜಾಗದಲ್ಲಿ ನಾಮ ಫಲಕ ಅಳವಡಿಸುವ ಸಂಬಂಧ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನೇನೇಕಟ್ಟೆ ಗ್ರಾಮ ಪಂಚಾಯತಿ ಸದಸ್ಯ ಕುಮಾರ್ ಇನ್ನಿತರರು ಇದ್ದರು.