ಮೈಸೂರು: ಶ್ರೀ ಅರ್ಜುನ ಅವಧೂತರು ಅವಧೂತರಾಗಿ ಪ್ರಕಟವಾಗಿ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಗಾನಭಾರತೀ ರಮಾಗೋವಿಂದ್ ಕಲಾ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಜ್ಞಾನ ಪ್ರಕಾಶೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಂಗೀತಾ ವಿದ್ಯಾನಿಧಿ ಡಾ.ವಿದ್ಯಾಭೂಷಣ ಮತ್ತು ತಂಡದವರು ನಡೆಸಿಕೊಟ್ಟ ಸಂಗೀತ ಕಚೇರಿ ಪ್ರೇಕ್ಷಕರನ್ನು ತಲೆದೂಗುವಂತೆ ಮಾಡಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಅವರ ಕಂಠಸಿರಿಯಿಂದ ಶಾರದೆ, ಕೃಷ್ಣ, ವಿಠ್ಠಲ, ರಾಘವೇಂದ್ರ ಸ್ವಾಮಿಗಳು ಸೇರಿದಂತೆ ಸುಮಧುರ ಗೀತೆಗಳನ್ನು ಹಾಡಿ ಭಕ್ತರನ್ನು ಮಂತ್ರಮುಗ್ದರನ್ನಾಗಿಸಿದರು.
ಮೊದಲಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅವಧೂತರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ಅವಧೂತರು ತಮಗೆ ದಿವ್ಯಾ ಅನುಗ್ರಹ ನೀಡಿದ ತಮ್ಮ ಗುರುಗಳಾದ ಶ್ರೀ ವೇಂಕಟಾಚಲ ಅವಧೂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಸ್ಕರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಚನ ನೀಡಿದ ಅರ್ಜುನ ಅವಧೂತರು ಜ್ಞಾನ ಎಂದರೆ ಆತ್ಮದ ಬೆಳಕು… ನೊಂದವರು ಮತ್ತು ಸಂಕಷ್ಟದಲ್ಲಿರುವವರಿಗೆ ದಾರಿ ತೋರಿಸುವುದೆ ನಿಜವಾದ ಜ್ಞಾನ ಅಂದರೆ ಬೆಳಕು ಎಂದರು.
ಸಂಗೀತ ವಿಧ್ಯಾನಿದಿ ಡಾ.ವಿದ್ಯಾಭೂಷಣ ಅವರನ್ನು ಅರ್ಜುನ ಅವಧೂತರು ಫಲ – ತಾಂಬೂಲ ನೀಡಿ ಮೈಸೂರು ಪೇಟಾ ತೊಡಿಸಿ ಅಯೋಧ್ಯಾ ಶ್ರೀರಾಮನ ಭಾವಚಿತ್ರವನ್ನು ನೀಡಿ ಗೌರವಿಸಿದರು. ಇದಕ್ಕೂ ಮುನ್ನ ನವ್ಯಾ ವಿಕಾಶ್ ಅವರು ಬಿಡಿಸಿದ ಶ್ರೀ ಹನುಮಾನ್ ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಅವಧೂತರು ಭಕ್ತರ ಮಧ್ಯೆ ಸಾಮಾನ್ಯ ಪ್ರೇಕ್ಷಕರಂತೆ ಕುಳಿತು ವಿದ್ಯಾಭೂಷಣರ ಸಂಗೀತ ಆಲಿಸಿದರು. ಆಧ್ಯಾತ್ಮಿಕ ಜನ್ಮ ದಿನದ ಅಂಗವಾಗಿ ಭಕ್ತರು ಫಲಾಂಮೃತವನ್ನು ಸಮರ್ಪಿಸಿ ಆಶೀರ್ವಾದ ಪಡೆದರು. ಪ್ರತಿಯೊಬ್ಬ ಭಕ್ತರಿಗೂ ಆಶೀರ್ವಾದ ಮಾಡಿದರು.
ಮೈಸೂರು, ಬೆಂಗಳೂರು, ತುಮಕೂರು, ಕೊಡಗು, ಶಿವಮೊಗ್ಗ, ಮಂಡ್ಯ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ಕಿರು ತೆರೆ ಮತ್ತು ಚಲನಚಿತ್ರ ನಟ- ನಟಿಯರು ಹಾಗೂ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.