ದೇವನಹಳ್ಳಿ: ಇತಿಹಾಸ ಪ್ರಸಿದ್ದ ಪಾರಿವಾಟ ಗುಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ನ.21 ರಂದು ಕಾರ್ತಿಕ ಮಾಸದ ಕಡೆಯ ಸೋಮವಾರ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆಯಲಿದೆ.
ಇದರ ಅಂಗವಾಗಿ ಶ್ರೀ ಆಂಜನೇಯಸ್ವಾಮಿ, ಗವಿಬೀರಲಿಂಗೇಶ್ವರಸ್ವಾಮಿ, ಭಕ್ತಕನಕದಾಸಸ್ವಾಮಿ ವೀರಭದ್ರ ದೇವರುಗಳಿಗೆ ವಿಶೇಷ ಅಲಂಕಾರ ಸಹಸ್ರನಾಮಾರ್ಚನೆ ಏರ್ಪಡಿಸಲಾಗಿದೆ ಸಂಜೆ ಕಾರ್ತಿಕ ದೀಪದರ್ಶನ ಇರಲಿದೆ.
ಈ ಬಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಮುನಿರಾಜು(ಅಪ್ಪಯ್ಯ) ಮಾಹಿತಿ ನೀಡಿದ್ದು ಸರ್ವರು ಆಗಮಿಸಿ ಆಂಜನೇಯಸ್ವಾಮಿ ದರ್ಶನ ಪಡೆದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಆನಂದಿಸುವಂತೆ ತಿಳಿಸಿದ್ದಾರೆ.
ಜೈ ಮಾರುತಿ ಭಕ್ತ ಮಂಡಳಿಯ ಮುನಿರಾಜು ಮಾತನಾಡಿ ಅಂದು ಬೆಳಿಗ್ಗೆ 9ಕ್ಕೆ ಗುಡ್ಡಗಾಡು ಓಟದ ಸ್ಪರ್ಧೆ, ದೇವಸ್ತಾನದ ಮುಂಭಾಗ 400 ಮೀಟರ್ ಪುರುಷರಿಗೆ ಓಟದ ಸ್ಪರ್ಧೆ, 100ಮೀಟರ್ ಮಹಿಳೆ ಮತ್ತು ಪುರುಷರಿಗೆ ಓಟದ ಸ್ಪರ್ಧೆ, ಕಬ್ಬಡಿ ಸ್ಪರ್ಧೆ, ಮಧ್ಯಾಹ್ನ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಜೇತರಿಗೆ ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು, ಉತ್ತಮ ರಾಸುಗಳಿಗೆ ಪುರಸಭೆಯಿಂದ ಬಹುಮಾನ ವಿತರಣೆ, ಅಶ್ವತ್ಥಕಲಾ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮುಂತಾದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಭಕ್ತಾಧಿಗಳಿಗೆ ಅನ್ನದಾನ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.