ದೇವಲಾಪುರ: ಈ ಬಾರಿಯ ಮುಂಗಾರು ಮಳೆ ಹತ್ತಾರು ಅನಾಹುತಗಳನ್ನು ಸೃಷ್ಟಿಸಿದ್ದು, ಈ ಪೈಕಿ ಯಡಿಯೂರು ಮಾರ್ಕೋನಹಳ್ಳಿ ಯಡಿಯೂರು ರಸ್ತೆಯ ಮಾರ್ಗಮಧ್ಯ ಸಿಗುವ ರಾಮೇನಹಳ್ಳಿಯಲ್ಲಿದ್ದ ಸೇತುವೆ ಮಳೆಗೆ ನದಿ ತುಂಬಿ ಹರಿದ ಪರಿಣಾಮ ಕೊಚ್ಚಿ ಹೋಗಿದೆ. ಆದರೆ ಸಂಬಂಧಿಸಿದವರು ನದಿ ದಾಟಲು ಪರ್ಯಾಯ ವ್ಯವಸ್ಥೆ ಮಾಡದ ಕಾರಣದಿಂದ ಈ ಸೇತುವೆಯನ್ನು ಆಶ್ರಯಿಸಿದ ಜನರು ಪರದಾಡುವಂತಾಗಿದೆ.
ಈ ಸೇತುವೆ ಹಿಂದಿನ ಮಳೆಗೆ ಶಿಥಿಲಾವಸ್ಥೆ ತಲುಪಿತ್ತು ಆದರೆ ಈ ಬಾರಿ ಭಾರೀ ಮಳೆಗೆ ಖಾನಿಹಳ್ಳ ತುಂಬಿ ಹರಿದ ಪರಿಣಾಮ ಸೇತುವೆ ಕೊಚ್ಚಿ ಹೋಗಿದ್ದು ಶಾಶ್ವತ ಸೇತುವೆ ನಿರ್ಮಾಣ ಮಾಡುವತ್ತ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೇ ಗಮನಹರಿಸದಿರುವುದು ಬೇಸರದ ಸಂಗತಿಯಾಗಿದೆ. ಸಾಮಾನ್ಯವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಸಮೀಪವಿರುವ ದೇವಲಾಪುರದಿಂದ ಯಡಿಯೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳಾಗಲಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಾಗಲೀ ರಾಮೇನಹಳ್ಳಿ( ಖಾನಿ ಹಳ್ಳ) ಸೇತುವೆ ಮೂಲಕ ಸಾಗಬೇಕಾಗಿದೆ. ಆದರೆ ಈ ಸೇತುವೆ ಬಗ್ಗೆ ಯಾರೂ ಕ್ರಮಕೈಗೊಳ್ಳದಿರುವುದು ಜನರಲ್ಲಿ ಆತಂಕ ತಂದಿದೆ. ರಾಮೇನಹಳ್ಳಿ ಖಾನಿ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಯಿಂದ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲವಾಗಿತ್ತು. ಈಗ ಸೇತುವೆ ಈ ಸೇತುವೆ ದುಸ್ಥಿತಿಗೊಂಡಿರುವುದರಿಂದ ಸಂಪರ್ಕವೇ ಸ್ಥಗಿತಗೊಂಡಂತಾಗಿದೆ.
ಶಾಸಕ ಸುರೇಶ್ ಗೌಡರ ಅವರ ಅವಧಿಯಲ್ಲಿ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿತ್ತಾದರೂ ಆ ನಂತರದ ಯಾವುದೇ ಪ್ರಕ್ರಿಯೆಗಳು ನಡೆಯದ ಕಾರಣ ಹೊಸ ಸೇತುವೆ ಕನಸು ಕನಸಾಗಿಯೇ ಉಳಿಯುವಂತಾಗಿದೆ. ಸೇತುವೆ ಕಾಮಗಾರಿ ಕೆಲಸ ಮಾಡದಿದ್ದರೂ ಪರ್ವಾಗಿಲ್ಲ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅಕ್ಕಪಕ್ಕದ ಗ್ರಾಮಗಳಿಗೆ ಸಂಚರಿಸಲು ಪೂರಕ ವ್ಯವಸ್ಥೆಯನ್ನು ಅಗತ್ಯವಾಗಿ ಮಾಡಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನಾದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಪ್ರಕೃತಿ ವಿಕೋಪದ ಪರಿಹಾರ ನಿಧಿಯಿಂದ ಸಂಪರ್ಕ ಸೇತುವೆಯನ್ನು ನಿರ್ಮಿಸುವಲ್ಲಿ ಕ್ರಮ ಕೈಗೊಳ್ಳುತ್ತಾರಾ? ಸ್ಥಳೀಯ ಜನಪ್ರತಿನಿಧಿಗಳು ಈ ಸಂಬಂಧ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.