ಯಳಂದೂರು: ಯಾವುದೇ ಪ್ರತಿಫಲ ಬಯಸದೆ ಸಮಾಜದ ಒಳಿತಿಗಾಗಿ ದುಡಿಯುವ ಸಮಾಜಸೇವಕರನ್ನೇ ಆದರ್ಶವಾಗಿಟ್ಟುಕೊಳ್ಳಿ ಎಂದು ಸಾಹಿತಿ ಕುಸುಮ ಆಯರಹಳ್ಳಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಎಸ್ಡಿವಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಚಾರಿತ್ರಿಕವಾಗಿ ಹಾಗೂ ಭೌಗೋಳಿಕವಾಗಿ ಯಳಂದೂರು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಲ್ಲಿನ ಬಳೇಮಂಟಪ ಹಾಗೂ ಬಿಳಿಗಿರಿರಂಗನಬೆಟ್ಟದ ಮಕ್ಕಳಿಗೆ ತಿಳಿಸುವ ಅನೇಕ ವಿಚಾರಗಳಿವೆ. ಸ್ಥಳೀಯರಾಗಿ ನಾವು ಪಕ್ಕದಲ್ಲಿದ್ದರೂ ಬಿಳಿಗಿರಿರಂಗನಬೆಟ್ಟ ಅನೇಕ ನಿಗೂಢತೆಯನ್ನು ಹೊಂದಿದ್ದು ಇದನ್ನು ಅರಿತುಕೊಳ್ಳುವ ಪ್ರಯತ್ನಗಳು ನಡೆಯಬೇಕು. ನಮ್ಮ ಅಕ್ಕಪಕ್ಕದಲ್ಲೇ ಆನೇಕರು ವಿಶೇಷ ಸಾಧನೆಗಳನ್ನು ಮಾಡಿದ ವ್ಯಕ್ತಿಗಳಿದ್ದು ಅವರನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯ ಗೌರವ ಕಾರ್ಯದರ್ಶಿ ಸುಧನ್ವ ಮಾತನಾಡಿ, ಒಂದು ಶಾಲೆ ನಡೆಸುವುದು ಸಾಫ್ಟ್ವೇರ್ ಕಂಪೆನಿ ನಡೆಸುವದಕ್ಕಿಂತಲೂ ಕಷ್ಟವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎಸ್ಡಿವಿಎಸ್ ವಿದ್ಯಾಸಂಸ್ಥೆ ಹಲವು ವರ್ಷಗಳಿಂದ ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಯತ್ನಿಸುತ್ತಿರುವುದು ಶ್ಲಾಘನೀಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಗಮನೀಯವಾಗಿದೆ. ಪರಿಸರದ ಒಳಗೆ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿರುವುದು ಇಲ್ಲಿನ ಸಿಬ್ಬಂಧಿ ಅಭಿನಂದನಾರ್ಹರು ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆ, ಕಲಿಕೆ, ಸಾಂಸ್ಕೃತಿ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಕಾಂತರಾಜು ಮಾತನಾಡಿದರು. ವಿದ್ಯಾಸಂಸ್ಥೆಯ ಸಂಸ್ಥಾಪಕ ಪಿ. ವೀರಭದ್ರಪ್ಪ, ಅಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿ, ವಿಖ್ಯಾತ್, ಮುಖ್ಯ ಶಿಕ್ಷಕ ವೀರಭದ್ರಸ್ವಾಮಿ, ಗುಂಬಳ್ಳಿ ಬಸವರಾಜು, ಮಲ್ಲಿಕಾರ್ಜುನ ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.