ಯಳಂದೂರು: ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಪಟ್ಟಣದ ಎಸ್ಬಿಐ ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ಟನ್ ಕಬ್ಬಿಗೆ 3500ರೂ. ನಿಗದಿ ಮಾಡಬೇಕು. ಎಫ್ಆರ್ಪಿ ದರವನ್ನು ಪುನರ್ ನಿಗಧಿ ಮಾಡಬೇಕು. ಕಬ್ಬು ಕಟಿಂಗ್ ದರ ಮತ್ತು ಸಾಗಾಣಿಕೆದರ ಟನ್ ಕಬ್ಬಿಗೆ 800 ರೂ. ಯಿಂದ 1000 ರೂ ಆಗಿದ್ದು ಇದನ್ನು ಎಸ್ಎಪಿ ಕಾನೂನಿನ ಅನ್ವಯ ನಿಗದಿ ಮಾಡಬೇಕು. ಇದರ ಉಪ ಉತ್ಪನ್ನಗಳಿಂದ ಬರುವ ಲಾಭಾಂಶವನ್ನು ಶೇ. 70-30ರ ಅನುಪಾತದಲ್ಲಿ ರೈತರಿಗೆ ಕೊಡಬೇಕು. ಕಾರ್ಖಾನೆಯಲ್ಲಿ ತೂಕದಲ್ಲಿ ರೈತರಿಗೆ ಆಗುತ್ತಿರುವ ಮೋಸವನ್ನು ತಪ್ಪಿಸಬೇಕು.
ವಿದ್ಯುತ್ ಖಾಸಗೀಕರಣವನ್ನು ತಪ್ಪಿಸಬೇಕು. ರೈತರ ಕೃಷಿ ಭೂಮಿಗಳಿಗೆ ಮೀಟರ್ ಅಳವಡಿಸಿ ಇದಕ್ಕೆ ಆಧಾರ್ ಲಿಂಕ್ ಮಾಡಿಸಿ ಹಣವ ವಸೂಲಿ ಮಾಡಲು ಸರ್ಕಾರ ಹುನ್ನಾರ ನಡೆಸಿದ್ದು ಈ ನಿಯಮ ಸಂಪೂರ್ಣ ರದ್ದಾಗಬೇಕು. ಜಿಲ್ಲೆಯಲ್ಲಿ ಈ ಬಾರಿ ಅತಿಯಾದ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಸರ್ಕಾರದಿಂದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು. ಬ್ಯಾಂಕ್ಗಳ ಕಿರುಕುಳವನ್ನು ತಪ್ಪಿಸಬೇಕು ಎಂದರು.
ರಸ್ತೆ ತಡೆಯಿಂದ ಕೆಲಕಾಲ ವಾಹನಗಳ ಓಡಾಟಕ್ಕೆ ತೊಂದರೆಯಾಗಿತ್ತು. ಕಬ್ಬು ಬೆಳೆಗಾರರ ಸಂಘದ ಷಡಕ್ಷರಿ, ಚಂದ್ರಶೇಖರಮೂರ್ತಿ, ಪಟೇಲ್ ಶಿವಮೂರ್ತಿ, ಮಹೇಶ್, ಬಸವಲಿಂಗಪ್ಪ, ಪ್ರಕಾಶ್, ಮಹದೇವಸ್ವಾಮಿ, ಗುರು, ಪುಟ್ಟಸ್ವಾಮಿ, ರಾಜು ಸೇರಿದಂತೆ ಅನೇಕರು ಇದ್ದರು.