News Karnataka Kannada
Monday, April 29 2024
ವಿಶೇಷ

ಕೆ.ಗುಡಿ ಮಾಹಿತಿ ಕೇಂದ್ರದಲ್ಲಿ ನೆಲೆನಿಂತ ವನ್ಯಪ್ರಾಣಿಗಳು!

Wild animals settled in K.Gudi Information Centre
Photo Credit : By Author

ಚಾಮರಾಜನಗರ: ಮೇಲಿನ ಶೀರ್ಷಿಕೆ ಓದಿದ ಮೇಲೆ ಮಾಹಿತಿ ಕೇಂದ್ರದಲ್ಲಿ ವನ್ಯಪ್ರಾಣಿಗಳಾ? ಹೀಗೆಂಬ ಪ್ರಶ್ನೆಯೊಂದು ಓದುಗರ ಮನದಲ್ಲಿ ಗಿರಕಿ ಹೊಡೆಯಬಹುದು. ಆದರೆ ಇದು ನಿಜನಾ? ಎಂದು ತಿಳಿಯಬೇಕಾದರೆ ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಗೆ ಹೋಗಬೇಕಾಗುತ್ತದೆ.

ಕೆ.ಗುಡಿ ನಿಸರ್ಗ ಸುಂದರ ತಾಣವಾಗಿದ್ದು, ಇಲ್ಲಿ ಸಾಕಾನೆ ಶಿಬಿರವಿದೆ. ಜತೆಗೆ ಸಫಾರಿಯೂ ಇದೆ. ಬಹಳಷ್ಟು ನಿಸರ್ಗಪ್ರೇಮಿಗಳು ಇಲ್ಲಿಗೆ ಆಗಮಿಸಿ ಒಂದಷ್ಟು ಸಮಯವನ್ನು ಕಳೆದು ಹೋಗುತ್ತಾರೆ. ಹೀಗೆ ಬರುವ ಪ್ರವಾಸಿಗರು ಇಲ್ಲಿನ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ್ದೇ ಆದರೆ ಒಂದು ಕ್ಷಣ ಬೆರಗಾಗಿ ಬಿಡುತ್ತಾರೆ. ಇಡೀ ಮಾಹಿತಿ ಕೇಂದ್ರ ಸುಂದರ ಹಸಿರ ಅರಣ್ಯದಿಂದ ಆವೃತವಾಗಿ ಅದರ ನಡುವೆ ವನ್ಯಪ್ರಾಣಿಗಳ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ.

ಸಫಾರಿಗೆ ಹೋಗುವ ಮುನ್ನವೇ ನಮಗೆ ಮಾಹಿತಿ ಕೇಂದ್ರದ ತುಂಬಾ ಹುಲಿ, ಚಿರತೆ, ಕಾಡಾನೆ, ಕಾಡುಕೋಳಿ, ಪಕ್ಷಿಗಳು ಸೇರಿದಂತೆ ವಿವಿಧ ವನ್ಯಪ್ರಾಣಿಗಳ ದರ್ಶನವಾಗಿ ಬಿಡುತ್ತದೆ. ಮೊದಲ ನೋಟದಲ್ಲಿಯೇ ಸುಂದರ ನಿಸರ್ಗವೊಂದು ನಮ್ಮ ಕಣ್ಣಮುಂದೆ ಬಂದ ಮತ್ತು ಅದರ ನಡುವೆ ವಿವಿಧ ವನ್ಯ ಪ್ರಾಣಿಗಳು ಹಾದು ಹೋದ ಅನುಭವವಾಗಿ ಬಿಡುತ್ತದೆ.

ಇವತ್ತಿನ ಜಂಜಾಟದ ಬದುಕಿನಲ್ಲಿ ಒಂದಷ್ಟು ನೆಮ್ಮದಿಗಾಗಿ ಜನ ಅರಣ್ಯದತ್ತ ತೆರಳುತ್ತಿದ್ದು ತಂಪಾದ ಸ್ವಚ್ಛಂದ ಗಾಳಿಯ ಪ್ರಶಾಂತ ವಾತಾವರಣದಲ್ಲಿ ಹಸಿರನ್ನು ಕಣ್ತುಂಬಿಸಿಕೊಂಡು ಅದರ ನಡುವೆ ವಾಸಿಸುವ ಪ್ರಾಣಿಗಳನ್ನು ನೋಡಿ ಖುಷಿಪಡುತ್ತಾನೆ. ಹೀಗೆ ಬರುವ ಪ್ರವಾಸಿಗರನ್ನು ಖುಷಿಪಡಿಸಲೆಂದೇ ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ವನ್ಯಪ್ರಾಣಿಗಳ ಲೋಕವನ್ನು ಚಿತ್ರಗಳಲ್ಲಿ ತೆರೆದಿಡಲಾಗಿದೆ.

ಇಲ್ಲಿನ ಮಾಹಿತಿ ಕೇಂದ್ರದತ್ತ ಕಣ್ಣು ಹಾಯಿಸಿದರೆ ನೈಜ ಪ್ರಾಣಿಗಳೇ ಬೆಚ್ಚಿ ಬೆರಗಾಗುವಂತೆ ಕಟ್ಟಡ, ನಾಮಫಲಕ, ಗೋಡೆ ಹೀಗೆ ಎಲ್ಲೆಂದರಲ್ಲಿ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಬರೆದು ಸಂಪೂರ್ಣ ಅರಣ್ಯಮಯದ ಸುಂದರ ಲೋಕವನ್ನು ಅರಣ್ಯ ಇಲಾಖೆ ತೆರೆದಿಟ್ಟಿದೆ. ಆ ಮೂಲಕ ಸಫಾರಿಗೆ ಬರುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ಮತ್ತು ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಮಾಹಿತಿ ಕೇಂದ್ರದ ಗೋಡೆಗಳಲ್ಲಿ ವಿವಿಧ ಪ್ರಾಣಿಗಳ ಚಿತ್ರಗಳನ್ನು ಬಿಡಿಸಿದ್ದಲ್ಲದೆ, ಸಫಾರಿ ಕೌಂಟರ್ ಕಟ್ಟಡ, ವಿವಿಧ ಗೋಡೆಗಳು, ದಾರಿ ಮಧ್ಯೆ ಸಿಗುವ ಫಲಕಗಳಲ್ಲಿ ಬಿಆರ್‌ಟಿ ವ್ಯಾಪ್ತಿಯಲ್ಲಿ ಕಂಡು ಬರುವ ಹುಲಿ, ಆನೆ, ಚಿರತೆ, ಕಾಡೆಮ್ಮೆ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳಲ್ಲದೆ, ಬಿಆರ್‌ಟಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಬರೆದಿರುವುದು ಗಮನಾರ್ಹವಾಗಿದೆ.

ಇಲ್ಲಿ ಬರೆಯಲಾಗಿರುವ ಚಿತ್ರಗಳು ತೈಲ ವರ್ಣದ್ದಾಗಿದ್ದು, ನೈಜ ಪ್ರಾಣಿಗಳೇ ನಮ್ಮೆದುರು ನಿಂತಂತೆ ಭಾಸವಾಗುತ್ತದೆ. ಇಂತಹ ಸುಂದರ ಚಿತ್ರಗಳನ್ನು ತಮ್ಮ ಕುಂಚದಿಂದ ಬರೆದ ಹೆಮ್ಮೆ ಚಿತ್ರದುರ್ಗದ ಕಲಾವಿದ ನಾಗರಾಜು ಅವರಿಗೆ ಸೇರುತ್ತದೆ. ಅವರು ಬರೀ ಪ್ರಾಣಿ ಪಕ್ಷಿಗಳ ಚಿತ್ರವನ್ನಷ್ಟೆ ಬಿಡಿಸಿಲ್ಲ. ಅದಕ್ಕೊಂದು ಜೀವ ತುಂಬುವಲ್ಲಿಯೂ ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು