ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹನುಮನಪುರ ಗ್ರಾಮದಲ್ಲಿ ಕಳೆದ ಎಂಟು ವರ್ಷಗಳಿಂದ ವಿದ್ಯುತ್ ದೀಪವಿಲ್ಲದೆ ದಲಿತ ಸಮುದಾಯದ ಕುಟುಂಬಗಳು ಪರದಾಡುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಹನುಮನಪುರ ಗ್ರಾಮದ ಹೊಸ ಬಡಾವಣೆಯಲ್ಲಿ ಬೀದಿಗೆ ಮತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ವಿದ್ಯುತ್ ದೀಪ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೋಣನೂರು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಚೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ದಲಿತರ ಬೀದಿಯಲ್ಲಿ ವಿದ್ಯುತ್ ಬೆಳಕನ್ನೇ ನಿವಾಸಿಗಳು ಕಂಡಲ್ಲ. ಬೀದಿಗೆ ವಿದ್ಯುತ್ ಕಂಬಗಳು ಇಲ್ಲ, ಮನೆಗೆ ವಿದ್ಯುತ್ ಸಂಪರ್ಕ ಅಂತೂ ಇಲ್ಲವೇ ಇಲ್ಲ. ರಾತ್ರಿಯ ಸಮಯದಲ್ಲಿ ತಿರುಗಾಡಲು ನಿವಾಸಿಗಳು ಹರಸಾಹಸ ಪಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯುತ್ ದೀಪ ಇಲ್ಲದೆ ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ ಸರ್ಕಾರ ನೀಡುತ್ತಿದ್ದ ಸೀಮೆಎಣ್ಣೆಯೂ ಈಗ ನೀಡುತ್ತಿಲ್ಲ. ಇದರಿಂದ ಬ್ಯಾಟರಿ ಬೆಳಕಲ್ಲಿ ನಾವು ಜೀವನ ಸಾಗಿಸುತ್ತಿದ್ದೇವೆ. ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ದೀಪವಿಲ್ಲ. ವಿದ್ಯುತ್ ಕಂಬ ಅಳವಡಿಸಲು ಹಲವು ಬಾರಿ ಚೆಸ್ಕಾಂ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೇ ಎಂದಿಲ್ಲ. ಚುನಾವಣೆ ಬರುವ ಜನಪ್ರತಿನಿಧಿಗಳು ಮತ್ತೆ ಇತ್ತ ತಿರುಗಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಇನ್ನಾದರೂ ನಮಗೆ ವಿದ್ಯುತ್ ಕಂಬ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಎಂದು ನಿವಾಸಿಗಳ ಒತ್ತಾಯ ಮಾಡಿದ್ದಾರೆ.