ಮೈಸೂರು: ನಾವು ನಿರುಪಯುಕ್ತ ವೆಂದು ಎಸೆಯುವ ಕಸವೂ ಕಲೆಗಾರರ ಕೈಗೆ ಸಿಕ್ಕರೆ ರಸವಾಗುತ್ತದೆ ಎಂದು ಎಚ್.ಡಿ.ಕೋಟೆಯ ಚಂದನಾ ತೋರಿಸಿಕೊಟ್ಟಿದ್ದಾರೆ. ಇವರು ತರಕಾರಿಯಾಗಿ ನಮ್ಮ ಆಹಾರ ಪದಾರ್ಥಗಳಲ್ಲಿ ಬಳಕೆಯಾಗುವ ಸೋರೆಕಾಯಿಯಲ್ಲೇ ಸುರಸುಂದರವಾದ ಕಲೆಯನ್ನು ಅರಳಿಸಿ ಎಲ್ಲರೂ ವಾವ್ ಎನ್ನುವಂತೆ ಮಾಡಿದ್ದಾರೆ.
ಹಾಗೆನೋಡಿದರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಪ್ರತಿಭೆಗಳಿರುತ್ತವೆ. ಆದರೆ ಅದಕ್ಕೆ ಕೆಲವರಷ್ಟೆ ನೀರೆರೆದು ಪೋಷಿಸಿಕೊಂಡು ಹೋಗುತ್ತಾರೆ. ಅದರಂತೆ ಚಂದನಾ ಕೂಡ ಚಿಕ್ಕ ಕಲೆಗೆ ಜೀವ ತುಂಬಿರುವುದು ಎದ್ದು ಕಾಣಿಸುತ್ತದೆ. ಯಾರಿಗೂ ಕಾಣದ ವಿಶೇಷತೆಯನ್ನು ಸೋರೆಕಾಯಿಯಲ್ಲಿ ಕಂಡ ಅವರು ಅದಕ್ಕೊಂದು ಸುಂದರ ಕಲೆಯ ರೂಪ ನೀಡಿದ್ದಾರೆ. ಸಾಮಾನ್ಯವಾಗಿ ಹೊಲಗದ್ದೆಗಳಲ್ಲಿ ಬೆಳೆಯುವ ಸೋರೆಕಾಯಿಯನ್ನು ಸಕಾಲದಲ್ಲಿ ಕೀಳದಿದ್ದರೆ ಅದು ಬೆಳೆದು ಬುರುಡೆಯಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ ಅದು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಅದನ್ನು ಹೊಲದಲ್ಲಿಯೇ ಬಿಡಲಾಗುತ್ತದೆ.
ಇಂತಹ ಉಪಯೋಗಕ್ಕೆ ಬಾರದಂತಹ ಸೋರೆಕಾಯಿಯ ಬುರುಡೆಗಳನ್ನು ಸಂಗ್ರಹಿಸಿದ ಚಂದನಾ 2015ರಿಂದಲೇ ಆಟಿಕೆಗಳನ್ನು ಮಾಡುವ ನೈಪುಣ್ಯತೆ ಪಡೆದುಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ತಾನು ಓದುತ್ತಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದ್ದಾರೆ. ಕಲೆ ಎಂಬುದು ಒಬ್ಬರ ಸ್ವತ್ತಲ್ಲ. ಕಲ್ಪನಾ ಲೋಕದ ಬಣ್ಣ ಬಣ್ಣದ ಕಲ್ಪನೆಗಳಿಗೆ ರೂಪ ನೀಡುವ ಚಿತ್ತಾರ ಎಂಬುದು ಚಂದನಾ ಮಾಡಿರುವ ಆಟಿಕೆಗಳಿಂದ ಗೊತ್ತಾಗಿ ಬಿಡುತ್ತದೆ. ತನ್ನೊಳಗೆ ಅಡಗಿದ್ದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರ ಮಟ್ಟದ ದೃಶ್ಯ ಕಲೋತ್ಸವದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿರುವುದು ಇವರ ಸಾಧನೆ.
ಕೋವಿಡ್ ಸಮಯದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 36 ರಾಜ್ಯಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳ ನಡುವೆ ಭಾಗವಹಿಸಿ ವ್ಯರ್ಥ ವಸ್ತುಗಳನ್ನು ಬಳಸಿಕೊಂಡು ಬೊಂಬೆ, ಆಟಿಕೆ ತಯಾರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಇವರು ನಮ್ಮ ಸುತ್ತ ಮುತ್ತ ಪ್ರಕೃತಿದತ್ತವಾಗಿ ದೊರಕುವ ಉಪಯೋಗಕ್ಕೆ ಬಾರದ ಅನೇಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಿದ ಆಟಿಕೆಗಳು ಎಲ್ಲರ ಗಮನಸೆಳೆದಿತ್ತು.
ಇವರು ಸೋರೆಕಾಯಿಯಿಂದ ತಯಾರಿಸಿದ ಅಜ್ಜ, ಅಜ್ಜಿ, ಬ್ಯಾಲೆನ್ಸಿಂಗ್ ಡಾಲ್, ಕೋಳಿ, ಗೂಬೆ, ಜಿರಾಫೆಯಂತಹ ಆಟಿಕೆಗಳು ಸುಂದರ ಮತ್ತು ಗಮನಾರ್ಹವಾಗಿವೆ. ಉಪಯೋಗವಿಲ್ಲದೆ ಮಣ್ಣಲ್ಲಿ ಮಣ್ಣಾಗಿ ಹೋಗುವ ಸೋರೆಕಾಯಿಗೆ ಜೀವ ತುಂಬುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.