ಚಾಮರಾಜನಗರ: ಇತ್ತೀಚೆಗೆ ಕೇರಳದಂತೆ ಕರ್ನಾಟಕದಲ್ಲಿಯೂ ಪ್ರವಾಸೋದ್ಯಮ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಕಾಣುತ್ತಿದೆ. ಚಾಮರಾಜನಗರ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳಲ್ಲಿ ಒಂದು ಈ ನಿಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಮತ್ತೊಂದು ವನ್ಯಜೀವಿ ಸಫಾರಿ ಆರಂಭಗೊಂಡಿದೆ.
ಈಗಾಗಲೇ ಬಂಡೀಪುರ, ಕೆ.ಗುಡಿ, ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿ ಇದ್ದು, ಇಂದಿನಿಂದ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಿ.ಜಿ.ಪಾಳ್ಯ ಸಮೀಪ ಸಫಾರಿ ಆರಂಭಗೊಂಡಿದೆ. ಒಂದೇ ಜಿಲ್ಲೆಯಲ್ಲಿ ನಾಲ್ಕು ಕಡೆ ವನ್ಯಜೀವಿ ಸಫಾರಿ ನಡೆಸಬಹುದಾಗಿದ್ದು, ಪಿ.ಜಿ.ಪಾಳ್ಯದ ಕಡೆ ಹುಲಿ, ಚಿರತೆ ಆನೆ, ಕಾಡೆಮ್ಮೆ, ಜಿಂಕೆ, ವೈವಿಧ್ಯಮಯ ಪಕ್ಷಿಗಳು ಸೇರಿದಂತೆ ಎಲ್ಲಾ ಪ್ರಾಣಿಗಳನ್ನು ಇನ್ಮುಂದೆ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.
ಶನಿವಾರ ಹನೂರು ಶಾಸಕ ಎಂ.ಆರ್.ಮಂಜುನಾಥ್ ಸಫಾರಿಗೆ ಚಾಲನೆ ನೀಡಿದ್ದು ಸಫಾರಿಗೆ ತೆರಳುವ ಪ್ರವಾಸಿಗರಿಗೆ ವಾಹನ ಶುಲ್ಕವಾಗಿ 100 ರೂಪಾಯಿ, ವಯಸ್ಕರಿಗೆ ತಲಾ 400 ಹಾಗೂ ಮಕ್ಕಳಿಗೆ 200 ರೂಪಾಯಿ ದರವನ್ನು ನಿಗದಿ ಪಡಿಸಲಾಗಿದೆ.