ಹುಣಸೂರು: ಹುಣಸೂರಿನಲ್ಲಿ ನಿರ್ಮಿಸುತ್ತಿರುವ ದೇವರಾಜ ಅರಸು ಹೈಟೆಕ್ ಆಸ್ಪತ್ರೆಯನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲಾಗುವುದೆಂದು ಆರೋಗ್ಯ ಸಚಿವ ಡಾ.ಆರ್.ಸುಧಾಕರ್ ಭರವಸೆ ನೀಡಿದ್ದಾರೆ.
ಶಾಸಕ ಎಚ್.ಪಿ.ಮಂಜುನಾಥರ ಮನವಿ ಮೇರೆಗೆ ನಿರ್ಮಾಣ ಹಂತದ ಆಸ್ಪತ್ರೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ಆರಂಭದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯನ್ನು 135 ಹಾಸಿಗೆಗಳಿಗೆ ಏರಿಕೆ ಮಾಡಲಾದ ಪರಿಣಾಮ ಅಂದಾಜು ವೆಚ್ಚವೂ ಹೆಚ್ಚಿದೆ. ಕೆಲ ತಾಂತ್ರಿಕ ಸಮಸ್ಯೆ, ಸ್ಥಳ ಬದಲಾವಣೆಯಿಂದಾಗಿ 25ರಿಂದ 32ಕೋಟಿಗೆ ಏರಿಕೆಯಾಗಿದೆ.
ಈ ವೇಳೆ 25 ಕೋಟಿಗೆ ನಿಗದಿಗೊಳಿಸುವ ಸಲುವಾಗಿ ಕಾಂಪೌಂಡ್, ನೀರಿನ ಟ್ಯಾಂಕ್, ಲಿಪ್ಟ್, ಒಳಾಂಗಣ ರಸ್ತೆ ಸೇರಿದಂತೆ ಕೆಲ ಪ್ರಮುಖ ಕಾಮಗಾರಿಗಳು ಕೈಬಿಟ್ಟು ಹೋಗಿದೆ. ಇದಕ್ಕೆ ಅಂದಾಜು 7ರಿಂದ 8 ಕೋಟಿ ರೂ ಅವಶ್ಯವಿದ್ದು, ತಕ್ಷಣವೇ ಆಡಳಿತಾತ್ಮಕ ಮಂಜೂರಾತಿ ಕೊಡಿಸುವೆ. ಅಲ್ಲದೆ ಅಗತ್ಯ ಉಪಕರಣಗಳ ಖರೀದಿಗೂ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಗುವುದೆಂದ ಸಚಿವರು ಸ್ಥಳದಿಂದಲೇ ಆರೋಗ್ಯ ಇಲಾಖೆ ಕಾರ್ಯದರ್ಶಿ ರಂದೀಪ್ರನ್ನು ಸಂಪರ್ಕಿಸಿ ಮಂಜೂರಾತಿಗೆ ತಕ್ಷಣವೇ ಅಗತ್ಯ ಕ್ರಮವಹಿಸುವಂತೆ ಹಾಗೂ ಹೆಚ್ಚುವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಕ್ರಿಯಾ ಯೋಜನೆ ಸಲ್ಲಿಸುವಂತೆ ಮುಖ್ಯ ಇಂಜಿನಿಯರ್ ಮಂಜಪ್ಪ, ಕಾರ್ಯಪಾಲಕ ಅಭಿಯಂತರ ಶ್ರೀನಾಥ್ರಿಗೆ ಸೂಚಿಸಿದರು.
ಇದೇ ವೇಳೆ ಶಾಸಕ ಹೆಚ್.ಪಿ.ಮಂಜುನಾಥ್ ಅವರು 2018ರ ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾದ ಈ ಆಸ್ಪತ್ರೆ ನಿರ್ಮಾಣ ಪೂರ್ಣಗೊಳ್ಳಲು ಹಾಗೂ ಅಗತ್ಯವಿರುವ ಬಾಕಿ ಅನುದಾನ ಬಿಡುಗಡೆಗೆ ಸದನದಲ್ಲಿ ಪ್ರಶ್ನಿಸಿದ್ದೆ, ಕೊಟ್ಟ ಭರವಸೆಯಂತೆ ಪೂರ್ಣಗೊಳ್ಳಲು ಅನುದಾನ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯದಲ್ಲೇ ಅತೀ ಹೆಚ್ಚು ಹೆರಿಗೆಯಾಗುವ ಆಸ್ಪತ್ರೆಗಳಲ್ಲಿ ಒಂದಾದ ಕಾಡಂಚಿನ ಹನಗೋಡು ಪಿಎಚ್ಸಿಯನ್ನು ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಶಾಸಕರ ಮನವಿಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು.
ಇದೇ ವೇಳೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ರಾತ್ರಿ ಪಾಳಿಯಲ್ಲಿ ಒಬ್ಬರೇ ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ ವೈದ್ಯರ ನೇಮಕಕ್ಕೆ ಕ್ರಮವಹಿಸಬೇಕೆಂಬ ಬೇಡಿಕೆಗೆ ಪಿ.ಜಿ.ವೈದ್ಯರ ನೇಮಕಕ್ಕೆ ಕ್ರಮವಹಿಸಲು ಡಾ.ಸರ್ವೇಶ್ರಾಜ್ ಅರಸ್ರಿಗೆ ಸೂಚಿಸಿದರು.
ಹಾಲಿ ಸಾರ್ವಜನಿಕ ಆಸ್ಪತ್ರೆಯನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾಗಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಸಂಸದ ಪ್ರತಾಪಸಿಂಹ ಮಾಡಿದ ಮನವಿಗೆ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಇಂದುಮತಿಗೆ ಅಗತ್ಯ ಕ್ರಮವಹಿಸಲು ಸೂಚಿಸಿ, ಹನಗೋಡು ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಪರಿಶೀಲಿಸಲಾಗುವುದೆಂದರು.