ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಹೆದ್ದಾರಿ ಬಂದ್ ಚಳುವಳಿಯನ್ನು ಕರ್ನಾಟಕ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಚಾಮರಾಜನಗರದ ಸೋಮವಾರಪೇಟೆ ಹತ್ತಿರದ ಮುಖ್ಯರಸ್ತೆಯಲ್ಲಿ ನಡೆಸಿದರು.
ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಮಾವಣೆಗೊಂಡ ರೈತರು ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಹೆದ್ದಾರಿ ಬಂದ್ ಮಾಡಿ ಚಳುವಳಿಯನ್ನು ನಡೆಸಿದರು.
ರಾಜ್ಯದಲ್ಲಿ ರಾಜ್ಯ ಸರ್ಕಾರವೇ ತೀವ್ರ ಬರಗಾಲವಿದೆ ಕುಡಿಯಲು ನೀರಿಲ್ಲ ಎಂದು ಜನಜಾನುವಾರುಗಳಿಗೆ ನೀರಿಲ್ಲ ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ತೀವ್ರ ಬರಗಾಲವಿದೆ ಸಂಕಷ್ಟವಿದ್ದರೂ ಕೂಡ ತಮಿಳುನಾಡಿನ ಓಲೈಕೆ ರಾಜಕಾರಣಕ್ಕಾಗಿ ರಾಜ್ಯದ ನೀರಾವರಿ ಸಚಿವರು ರಾಜ್ಯದ ನೀರನ್ನು ಬಿಡುತ್ತಿರುವುದು ರಾಜ್ಯದ ಜನರಿಗೆ ಬೆಳೆ ಬೆಳೆಯುವುದಕಲ್ಲ ಕುಡಿಯುವ ನೀರಿಗಾಗಿ ಹಾಹಾಕಾರವಿದ್ದರೂ ರಾಜಕಾರಣಕ್ಕಾಗಿ ನಿರ್ವಹಿಸುವುದು ಇದು ರೈತರಿಗೆ ಮತ್ತು ರಾಜ್ಯದ ಜನರಿಗೆ ನೀರಾವರಿ ಸಚಿವರು ಮಾಡಿದಂತಹ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕೆ ಆರ್ ಎಸ್ ಜಲಾಶಯದಲ್ಲಿ ಕೇವಲ 16 ಟಿಎಂಸಿ ನೀರು ಮಾತ್ರ ಇದ್ದು ರಾಜ್ಯದ ಜನರಿಗೆ ಕುಡಿಯುವ ಮತ್ತು ಜನಜಾನುವಾರುಗಳಿಗೆ ಪ್ರತಿ ತಿಂಗಳಿಗೆ ಎರಡು ಟಿಎಂಸಿ ನೀರು ಬೇಕಾಗುತ್ತದೆ. ಆದರೆ ಪ್ರಾಧಿಕಾರದ ಆದೇಶದ ಮೇಲೆ ಜಲಾಶಯದಿಂದ ನೀರನ್ನು ಬಿಟ್ಟರೆ ಉಳಿಯುವುದು ಕೇವಲ ಹನ್ನೊಂದು ಟಿಎಂಸಿ ಮಾತ್ರ ಇದರಲ್ಲಿ ಎಂಟು ಟಿಎಂಸಿ ನೀರು ಡೆಡ್ ಸ್ಟೋರೇಜ್ ಆದ ಕಾರಣ ರಾಜ್ಯ ಸರ್ಕಾರ ನೀರನ್ನು ಬಿಟ್ಟು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಾಕುವ ರಾಜಕೀಯ ಇಬ್ಬಂದಿ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ನೀರನ್ನು ಹರಿಸಿ ಯಾವುದೇ ಬೆಳೆ ನಷ್ಟವನ್ನು ಕೂಡ ರೈತರಿಗೆ ನೀಡದೆ ರೈತರನ್ನು ಬೀದಿ ಪಾಲು ಮಾಡಿ ಈಗ ಕುಡಿಯುವ ನೀರನ್ನು ಕೂಡ ಹರಿಸಿ ಕುಡಿಯುವ ನೀರಿಗೆ ತಾತ್ವಾರ ತರುವ ಹುನ್ನಾರ ನಡೆಯುತ್ತಿದೆ ಆದ್ದರಿಂದ ನ್ಯಾಯ ಮಂಡಳಿಗೆ ಮನವರಿಕೆ ಮಾಡಿ ತಕ್ಷಣ ನೀರನ್ನು ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ಹಾಡ್ಯ, ಡಾ. ಅನುಮಯ್ಯ, ರವಿ ಊಡಿಗಾಲ, ಮಂಜುನಾಥ್, ಚೇರ್ಮನ್ ಗುರು ಮಲ್ಲಪ್ಪ, ಅರಳಿ ಕಟ್ಟೆ ಕುಮಾರ್, ಕನಕ ಜನ್ನೂರು, ಶಾಂತರಾಜು, ಮುದ್ದಹಳ್ಳಿಚಿಕ್ಕ ಸ್ವಾಮಿ, ಶಿವಣ್ಣ ದೇವನೂರು ನಾಗೇಂದ್ರ ಅಂಬಳೆ ಮಹದೇವಸ್ವಾಮಿ ಒಳಗೆರೆ ಗಣೇಶ್ ಮಲಿಯೂರು ಮಹೇಂದ್ರ ಪ್ರವೀಣ್ ಸಿದ್ದರಾಜು ಭಾಗವಹಿಸಿದ್ದರು.