ಚಾಮರಾಜನಗರ: ಸುಮಾರು 13 ಕೋಳಿ ಮೊಟ್ಟೆಯನ್ನು ನುಂಗಿದ್ದ ನಾಗರಹಾವನ್ನು ಸ್ನೇಕ್ ಅಶೋಕ್ ಎಂಬುವರು ರಕ್ಷಣೆ ಮಾಡುವ ವೇಳೆ, ನುಂಗಿದ್ದ ಮೊಟ್ಟೆಗಳನ್ನು ನಾಗರ ಹಾವು ಕಕ್ಕಿರುವ ಘಟನೆ ತಾಲ್ಲೂಕಿನ ಅಂಕನಶೆಟ್ಟಿ ಪುರದ ಬಾಬುರವರ ತೋಟದ ಮನೆಯಲ್ಲಿ ನಡೆದಿದೆ.
ಬಾಬು ಅವರ ತೋಟದ ಮನೆಯಲ್ಲಿ ಕೋಳಿಗಳನ್ನು ಸಾಕಲಾಗಿತ್ತು, ಕೋಳಿ ಇಟ್ಟಿದ್ದ 13 ಮೊಟ್ಟೆಗಳನ್ನು ನಾಗರಹಾವು ನುಂಗಿತ್ತು. ಅಲ್ಲೇ ವಿಶ್ರಾಂತಿಯೂ ಪಡೆಯುತ್ತಿತ್ತು. ಇದನ್ನು ಕಂಡ ಬಾಬು ಕುಟುಂಬಸ್ಥರು ಸ್ನೇಕ್ ಅಶೋಕ್ ರವರಿಗೆ ದೂರವಾಣಿ ಮೂಲಕ ಹಾವು ಹಿಡಿಯಲು ತಿಳಿಸಿದರು.
ರಾತ್ರಿ 11 ಗಂಟೆಯಾಗಿದ್ದರೂ ಸಹ ಸ್ನೇಕ್ ಅಶೋಕ್ ಅಂಕನಶೆಟ್ಟಿ ಪುರಕ್ಕೆ ತೆರಳಿ ಬಾಬು ರವರ ಮನೆಯಲ್ಲಿ ಕೋಳಿ ಮೊಟ್ಟೆ ನುಂಗಿದ್ದ ಹಾವನ್ನು ಹಿಡಿಯುವಾಗ ಹಾವು ತಾನು ನುಂಗಿದ್ದ 13 ಕೋಳಿ ಮೊಟ್ಟೆಗಳನ್ನು ಕಕ್ಕಿದ್ದು ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ರಕ್ಷಿಸಿದ ನಾಗರಹಾವನ್ನು ಅಶೋಕ್ ರವರು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.