ಮೈಸೂರು: ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿರುವುದನ್ನು ವಿರೋಧಿಸಿ, ಕೂಡಲೇ ಜಿಎಸ್ಟಿ ಏರಿಕೆ ಹಿಂಪಡೆಯಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಾಮಾನ್ಯ ಜನರು, ಬಡವರು, ಮಧ್ಯಮ ವರ್ಗದವರು ಉಪಯೋಗಿಸುವ ಆಹಾರ ಪದಾರ್ಥಗಳು, ಮಜ್ಜಿಗೆ, ಮೊಸರು ಮತ್ತು ಲಸ್ಸಿ ಸೇರಿದಂತೆ ಎಲ್ಲದರ ಮೇಲೂ ಜಿಎಸ್ಟಿ ಹಾಕಿರುವುದು ಖಂಡನೀಯ. ಜಿಎಸ್ಟಿಯಿಂದ ಬಡವರು ಕಂಗಾಲಾಗಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ಟಿ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದು, ಅವೈಜ್ಞಾನಿಕವಾಗಿ ದರ ನಿಗದಿ ಮಾಡುತ್ತಿದೆ. ಜಿಎಸ್ಟಿ ಜನಸಾಮಾನ್ಯರಿಗೆ ಹೊರೆ ಆಗಬಾರದು. ಮೋದಿ ಸರ್ಕಾರ ಬೆವರು ಸುರಿಸುವ ಬಡವರಿಗೆ ತೆರಿಗೆ ಹಾಕುತ್ತಿದ್ದು, ಕೂಡಲೇ ಜಿಎಸ್ಟಿ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ತರಕಾರಿ, ಟೊಮ್ಯಾಟೊ ಮೇಲೆ ಜಿಎಸ್ಟಿ ಹಾಕುತ್ತಾರೆ. ಆದರೆ, ಪೆಟ್ರೋಲ್, ಡಿಸೇಲ್ ಬೆಲೆಯ ಮೇಲೆ ಏಕೆ ಜಿಎಸ್ಟಿ ಹಾಕಲಿಲ್ಲ? ಇನ್ನು ಮುಂದೆ ನಾಯಿಗಳ ಮೇಲೆ, ಹೆಣಗಳ ಮೇಲೂ ಜಿಎಸ್ಟಿ ಹಾಕುತ್ತಾರೆ. ಉಸಿರಾಡುವ ಗಾಳಿ, ಮೂತ್ರದ ಮೇಲೂ ಜಿಎಸ್ಟಿ ಹಾಕುತ್ತಾರೆ, ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಬೇಕು. ಮುಂದಿನ ವಾರ ಹಾರ್ಡಿಂಜ್ ವೃತ್ತದಲ್ಲಿ ಮೊಸರು, ಮಜ್ಜಿಗೆ ಅಭಿಷೇಕ ಮಾಡುವುದರ ಮೂಲಕ ಜಿಎಸ್ಟಿ ವಿರೋಧಿಸುತ್ತೇವೆ ಎಂದರು.
ಮಹದಾಯಿ ಯೋಜನೆ ಅನುದಾನ ಕಡಿಮೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಇದಕ್ಕೆ ಮೊದಲು ಇದ್ದಂತಹ ಹಣವನ್ನು ನೀಡಬೇಕು. ಸಂಪೂರ್ಣ ಕಾಲುವೆ ತೆಗೆದು ಹೆಚ್ಚಿನ ಹಣ ನೀಡಬೇಕು. ಯಾವುದೇ ಕಾರಣಕ್ಕೂ ಅನುದಾನ ಕಡಿಮೆ ಮಾಡಬಾರದು. ಮೇಕೆದಾಟು ಯೋಜನೆಯನ್ನು ಒಂದಿಂಚು ಕಡಿಮೆ ಮಾಡಬಾರದು, ಯಾವುದೇ ಕಾರಣಕ್ಕೂ ತಮಿಳುನಾಡಿನ ಸರ್ಕಾರಕ್ಕೆ ಹೆದರಬಾರದು ಎಂದು ಒತ್ತಾಯಿಸಿದರು. ತಾಯೂರು ವಿಠಲಮೂರ್ತಿ, ಪಾರ್ಥಸಾರಥಿ ಭಾಗವಹಿಸಿದ್ದರು.