ಚಾಮರಾಜನಗರ: ಭಿಕ್ಷಾಟನೆ ಮಾಡುವ ಮಕ್ಕಳನ್ನು ಗುರುತಿಸಿ, ತಿಳುವಳಿಕೆ ನೀಡಿ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಭಿಕ್ಷಾಟನೆಯನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳು, ಪಿಎಂಎಸ್ಆರ್ ಸಂಸ್ಥೆ, ಜಿಲ್ಲಾ ಮತ್ತು ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರದಲ್ಲಿ ನಡೆದ ಮಕ್ಕಳ ಬಿಕ್ಷಾಟನೆ ತಡೆ ಉಸ್ತುವಾರಿ ತಂಡದ ಸದಸ್ಯರಿಗೆ ಮಕ್ಕಳ ಭಿಕ್ಷಾಟನೆ ತಡೆಗಟ್ಟುವ ಕುರಿತು ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಪ್ರತಿಯೊಬ್ಬರು ಸಮಾಜಮುಖಿಯಾಗಿ ಬದುಕುವ ಅವಕಾಶ ಮಾಡಿಕೊಡಲು ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿನಿಲಯ ಇನ್ನಿತರೆ ಸೌಲಭ್ಯಗಳನ್ನು ನೀಡಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ ಎಂದರು.
ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡ ಮಕ್ಕಳು ಪೋಷಕರಿಲ್ಲದ ಸಂದರ್ಭದಲ್ಲಿ ಭಿಕ್ಷಾಟನೆಗೆ ಒಳಗಾಗಿರುತ್ತಾರೆ. ಅಂತಹ ಮಕ್ಕಳನ್ನು ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು ರಕ್ಷಿಸಬೇಕು. ಮಕ್ಕಳು ಭಿಕ್ಷಾಟನೆಯಿಂದ ಹೊರಬಂದು ಉತ್ತಮ ಜೀವನ ರೂಪಿಸಿಕೊಳ್ಳಲು ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಸಂಪೂರ್ಣವಾಗಿ ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಸಿಇಒ ಗಾಯತ್ರಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕಾರ್ಯಗಾರವನ್ನು ಉದ್ಘಾಟಿಸಿ, ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ಲ್ಯಾಪ್ಟಾಪ್ನ್ನು ವಿತರಿಸಿ ಕಾರ್ಯಾಗಾರಕ್ಕೆ ಶುಭ ಹಾರೈಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ್ ಅವರು ಮಾತನಾಡಿ ಮಾನವ ಕಳ್ಳ ಸಾಗಣಿಕೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಿಲುಕಿ ಬಲಿಪಶುಗಳಾಗುತ್ತಿದ್ದಾರೆ. ಮಹಿಳೆಯರನ್ನು ಹಾಗೂ ಮಕ್ಕಳನ್ನು ಬಿಕ್ಷಾಟನೆಗೆ ತಳ್ಳಿ ಅವರ ಜೀವನವನ್ನೇ ನಾಶ ಮಾಡುತ್ತಿದ್ದಾರೆ. ಭಿಕ್ಷಾಟನೆ ನಿರ್ಮೂಲನೆಗೆ ಮಹಿಳೆಯರು ಮತ್ತು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದರು.
ಭಿಕ್ಷಾಟನೆಗೆ ಪ್ರಚೋಧನೆ ನೀಡುವುದು ಕೂಡ ಅಪರಾಧ. ಯಾವುದೇ ಸ್ಥಳದಲ್ಲಿ ಮಹಿಳೆಯರು ಮತ್ತು ಮಕ್ಕಳು ಬಿಕ್ಷಾಟನೆಯಲ್ಲಿ ತೊಡಗಿರುವುದು ಕಂಡು ಬಂದರೆ ಸಂಬಂಧಪಟ್ಟವರಿಗೆ ಕೂಡಲೇ ತಿಳಿಸಬೇಕು ಎಂದು ಶ್ರೀಧರ್ ಅವರು ತಿಳಿಸಿದರು.
ಡಿವೈಎಸ್ಪಿ ಪ್ರಿಯಾದರ್ಶಿನಿ ಸಾಣೆಕೊಪ್ಪ ಅವರು ಮಾತನಾಡಿ ಎನ್ಎಚ್ಆರ್ಸಿ ಪ್ರಕಾರ ಪ್ರತಿ ವರ್ಷ ೪೦ ಸಾವಿರ ಮಕ್ಕಳು ಅಪಹರಣವಾಗುತ್ತಿದ್ದಾರೆ. ಈ ಪೈಕಿ ಇನ್ನೂ 11000 ಮಕ್ಕಳು ಪತ್ತೆಯಾಗಿಲ್ಲದಿರುವುದಿಲ್ಲ. ಮಕ್ಕಳ ಭಿಕ್ಷಾಟನೆ ತಡೆಗಟ್ಟುವ ನಿಟ್ಟಿನಲ್ಲಿ ರಕ್ಷಣಾ ಪೂರ್ವ ಕಾರ್ಯಗಳು, ಕಳ್ಳಸಾಗಣೆಗೆ ಅನ್ವಯವಾಗುವ ಕಾನೂನುಗಳು ಹಾಗೂ ಮಕ್ಕಳ ಭಿಕ್ಷಾಟನೆ ತಡೆಯುವಲ್ಲಿ ಪೊಲೀಸ್ ಇಲಾಖೆಯ ಪಾತ್ರದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟು ನಾವೆಲ್ಲರೂ ಎಲ್ಲಿಯವರೆಗೆ ಜಾಗೃತರಾಗುವುದಿಲ್ಲವೂ ಅಲ್ಲಿಯವರೆಗೆ ಭಿಕ್ಷಾಟನೆ ನಿಲ್ಲುವುದಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ, ಮಹಿಳಾ ಕಲ್ಯಾಣ ಸಮಿತಿ ಅಧ್ಯಕ್ಷರಾದ ಎನ್.ಎಂ. ಸರಸ್ವತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ರಾಜ್, ಇತರರು ಕಾರ್ಯಾಗಾರದಲ್ಲಿ ಹಾಜರಿದ್ದರು.