ರಾಮನಗರ: ಅತಿಥಿಗಳ ಕಾಫಿ, ಟೀ ಗಾಗಿ 1.50 ಲಕ್ಷ ರೂ ಖರ್ಚು ಮಾಡಿರುವುದನ್ನು ಖಂಡಿಸಿ ಹಾಗೂ ಅದಕ್ಕಾಗಿ ಮಾಹೆಯಾನ ನಿಗದಿ ಮಾಡಿರುವ ೧೫ ಸಾವಿರ ರೂಗಳ ಅನುದಾನ ರದ್ದುಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಇಲ್ಲಿನ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಕೊಠಡಿಗೆ ಭೇಟಿ ನೀಡುವ ಅತಿಥಿಗಳು ಮತ್ತು ಸಾರ್ವಜನಿಕರಿಗೆ ಕಾಫಿ, ಟೀ ನೀಡಲು ಮಾಸಿಕ 15ಸಾವಿರ ರೂ ಹಾಗೂ 10 ತಿಂಗಳಿಗೆ 1.50 ಲಕ್ಷ ರೂ ಅನುದಾನ ವಿಷಯ ಸೂಚಿಯಲ್ಲಿ ನಿಗದಿ ಮಾಡಿರುವುದನ್ನು ಕಂಡ ಜೆಡಿಎಸ್ ಸದಸ್ಯರು ತಕ್ಷಣವೇ ಈ ಅನುದಾನವನ್ನು ರದ್ದುಪಡಿಸುವಂತೆ ಒತ್ತಾಯಿಸಿದರು. ಇದಕ್ಕೆ ನಮ್ಮ ಸಹಮತವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ಈ ವೇಳೆ ಜೆಡಿಎಸ್ ಸದಸ್ಯರಾದ ಮಂಜುನಾಥ್, ರಮೇಶ್, ಗೇಬ್ರಿಯಲ್, ಶಿವಸ್ವಾಮಿ ದ್ವನಿಗೂಡಿಸಿ ಆಕ್ಷೇಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಸಮರ್ಥನೆ ನೀಡಲು ಮುಂದಾಗಿ ಈ ವಿಚಾರ ಕಳೆದ ಸಭೆಯಲ್ಲೇ ಪ್ರಸ್ತಾಪವಾಗಿದ್ದು, ಅನುಮೋದನೆ ಪಡೆಯಲಾಗಿದೆ. ಇದೀಗ ಮತ್ತೆ ಅದೇ ವಿಚಾರವನ್ನು ಚರ್ಚಿಸುವ ಅಗತ್ಯವಿಲ್ಲ ಎಂದರು.
ಕಳೆದ ಸಭೆಯಲ್ಲೂ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು. ವಿರೋಧದ ನಡುವೆಯೂ ಬಿಲ್ ಪಾವತಿಗೆ ಅನುಮೋದನೆ ನೀಡಲಾಗಿದೆ. ಬಿಲ್ ಪಾವತಿ ಮಾಡುವುದಕ್ಕೆ ಜೆಡಿಎಸ್ ಸದಸ್ಯರ ಅನುಮತಿ ಇಲ್ಲ. ಹೀಗಾಗಿ ಅನುದಾನ ರದ್ದುಪಡಿಸುವಂತೆ ಮತ್ತೊಮ್ಮೆ ಆಗ್ರಹಿಸುತ್ತಿದ್ದೇವೆ ಎಂದರು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಏರು ಧ್ವನಿಯಲ್ಲಿ ವಾಗ್ವಾದ ನಡೆಯಿತು. ಯಾರು, ಏನು ಮಾತನಾಡುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಪೌರಾಯುಕ್ತ ನಂದಕುಮಾರ್ ಮಧ್ಯ ಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಉಭಯ ಪಕ್ಷಗಳ ಸದಸ್ಯರು ತಮ್ಮ ನಿಲುವನ್ನು ಪದೇ ಪದೇ ಜೋರು ಧ್ವನಿಯಲ್ಲಿ ಹೇಳುತ್ತಿದ್ದರು. ಯಾರೂ ಕೂಡ ಪಟ್ಟು ಸಡಿಲಿಸಲು ಒಪ್ಪಲಿಲ್ಲ. ಕಡೆಗೆ ಜೆಡಿಎಸ್ ಸದಸ್ಯರು ನಮ್ಮ ವಿರೋಧದ ನಡುವೆಯೂ ಬಿಲ್ ಪಾವತಿಗೆ ಅನುಮೋದನೆ ನೀಡುವುದಾದರೆ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದಾಗ ಕಾಂಗ್ರೆಸ್ ಸದಸ್ಯರೂ ಸಭೆಯಿಂದ ಹೊರಡಲು ತೀರ್ಮಾನಿಸಿದರು. ಈ ವೇಳೆ ಸಭಾಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಅವರು ಸಭೆಯನ್ನು ಮುಂದೂಡುತ್ತಿರುವುದಾಗಿ ಘೋಷಿಸಿದರು. ಉಭಯ ಪಕ್ಷಗಳ ಸದಸ್ಯರು ಪರಸ್ಪರ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಹೊರ ನಡೆದರು.
ಬಳಿಕ ನಗರಸಭೆ ಕಾರ್ಯಾಲಯದ ಮುಖ್ಯದ್ವಾರದ ಬಳಿ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿ, ನಗರಸಭೆ ಆಡಳಿತದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ಆರ್.ಎ.ಮಂಜುನಾಥ್ ಅವರು ಮಾತನಾಡಿ, ಸಭೆಯಲ್ಲಿ ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ವಿಚಾರದಲ್ಲೂ ಕಾಂಗ್ರೆಸ್ ಸದಸ್ಯ ಕೆ.ಶೇಷಾದ್ರಿ ಅವರು ಮೂಗು ತೂರಿಸುತ್ತಿದ್ದು ನಮಗೆ ಮಾತನಾಡಲು ಬಿಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.