ಚಾಮರಾಜನಗರ: ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲ. ಕೃಷಿಚಟುವಟಿಕೆಗಳಿಗೆ ಜಮೀನಿಗೆ ತೆರಳುವ ಕೃಷಿಕರಿಗೆ ನೀರು ನಿಂತು ತೊಂದರೆಯಾಗಿದ್ದು, ಕೂಡಲೇ ಪರ್ಯಾಯ ಕ್ರಮಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಾಲೂಕಿನ ದೊಡ್ಡಮೋಳೆ ಗ್ರಾಮದ ಗ್ರಾಮಸ್ಥರು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಮಾಡಿದರು.
ತಾಲೂಕಿನ ಹರದನಹಳ್ಳಿ ಗ್ರಾಮದ ಮರಗದಕೆರೆ, ಚಿಕ್ಕಕೆರೆ, ಸಿಂಡಿಗೆರೆ, ದೊಡ್ಡಕೆರೆಯಿಂದ ನೀರು ಬಿಟ್ಟವೇಳೆ ದೊಡ್ಡಮೋಳೆ ಗ್ರಾಮದ ಮಧ್ಯೆ ನೀರು ನಿಲ್ಲುತ್ತಿದೆ. ಈ ನೀರು ಸ್ಮಶಾನ ಜಾಗದಲ್ಲಿ ನಿಲ್ಲುತ್ತಿರುವುದರಿಂದ ಗ್ರಾಮಸ್ಥರು ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ದಾರಿಯಿಲ್ಲದಂತಾಗಿದೆ ಅಳಲು ತೋಡಿಕೊಂಡರು.
ಮನವಿಯ ಹಿನ್ನಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು.
ಇದೇ ವೇಳೆ ಮಾತನಾಡಿದ ಶಾಸಕರು ಸ್ಮಶಾನ ಸೇರಿದಂತೆ ಕೃಷಿಜಮೀನುಗಳಿಗೆ ತೆರಳುವ ಸಾರ್ವಜನಿಕರ ಅನೂಕೂಲಕ್ಕಾಗಿ ಪರ್ಯಾಯ ರಸ್ತೆಮಾರ್ಗ ಕಲ್ಪಿಸಬೇಕು, ಗ್ರಾಮದ ಮಧ್ಯೆ ನೀರು ನಿಲ್ಲದಂತೆ ಕ್ರಮಕೈಗೊಳ್ಳುವಂತೆ ಶಾಸಕರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ನಿಗಮದ ಎಇಇ ಮಂಜುನಾಥ್, ಎಂಜಿನಿಯರ್ ಗಳಾದ ಮಹದೇವಸ್ವಾಮಿ, ಅವಿನಾಶ್ ಸೇರಿದಂತೆ ಗ್ರಾಮಸ್ಥರು ಇದ್ದರು.