ಚಾಮರಾಜನಗರ: ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದ ನಕಲಿ ಅಲೋಪತಿ ವೈದ್ಯರಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿ, ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿದ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿಯಲ್ಲಿ ಘಟನೆ ನಡೆದಿದೆ.
ತಾಲೂಕಿನ ನಕಲಿ ಕ್ಲಿನಿಕ್ ಗಳ ಮೇಲೆ ಡಿಎಚ್ಒ ಡಾ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಕೌದಳ್ಳಿ ಗ್ರಾಮದಲ್ಲಿರುವ ಆದಮ್ ಕ್ಲಿನಿಕ್, ಜನತಾ ಕ್ಲಿನಿಕ್ ಹಾಗೂ ದೀಪಾ ಕ್ಲಿನಿಕ್ ಗಳಿಗೆ ನೋಟಿಸ್ ಜಾರಿ ಮಾಡಿ ಬಂದ್ ಮಾಡಿಸಲಾಗಿದೆ.
ಅಲ್ಲದೆ ಹನೂರು ಅಜ್ಜೀಪುರ, ರಾಮಾಪುರ ಮತ್ತು ಕೂಡ್ಲೂರು, ಹೂಗ್ಯಂ ಇತರೆ ಕ್ಲಿನಿಕ್ ಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲೈಸೆನ್ಸ್ ಒಬ್ಬರ ಹೆಸರಿನಲ್ಲಿದ್ದು, ಚಿಕಿತ್ಸೆ ಕೊಡುವವರು ಮತ್ತೊಬ್ಬರು ಆಗಿರುವುದು ಅಲ್ಲದೆ, ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ನಕಲಿ ಕ್ಲಿನಿಕ್ ಗಳ ಹಾವಳಿ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇಲೆ ದಾಳಿ ನಡೆಸಲಾಗಿದೆ.