ಗುಂಡ್ಲುಪೇಟೆ : ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರ ಕೈ ಬಲಪಡಿವುದರ ಮೂಲಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆ.ಡಿ.ಎಸ್ ಅನ್ನು ಅಧಿಕಾರಕ್ಕೆ ತಂದು ಕುಮಾರಣ್ಣನವರನ್ನು ಮುಖ್ಯಮಂತ್ರಿ ಮಾಡಲು ಸಹಕರಿಸಬೇಕೆಂದು ವಿಧಾನಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ ಹೇಳಿದರು.
ಗುಂಡ್ಲುಪೇಟೆ, ಬೇಗೂರು. ವೀರನಪುರ ಕ್ರಾಸ್ಗಳಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಂಕಲ್ಪ ಒಂದೇ ಆಗಿದ್ದು ಅದು ರೈತರ ಅಭಿವೃದ್ಧಿ, ರೈತರ ಬಾಳು ಹಸನಾಗಬೇಕು, ವ್ಯವಸಾಯಕ್ಕೆ ನೀರನ್ನು ಕೊಡಬೇಕು, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೆಕು ಹಾಗು ರೈತರಿಗೆ ಅನ್ಯಾಯವಾದಾಗ ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದಾಗಿದೆ. ಹೊರ ರಾಜ್ಯಗಳಲ್ಲಿ ಭತ್ತದ ತಳಿಗಳಿಗೆ ದೇವೇಗೌಡರ ಹೆಸರನ್ನು ಇಟ್ಟಿದ್ದಾರೆ ಅದನ್ನು ನಾವು ಕರ್ನಾಟಕದಲ್ಲಿ ಮಾಡಬೇಕಾಗಿದೆ ಎಂದ ಅವರು ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಿ ಎಲ್ಲಾ ನದಿಗಳ ನೀರನ್ನು ತರುವುದಾಗಿದೆ. ಇಂದು ಒಂದೇ ದಿನ ೧೫ಕಡೆ ಜನತಾ ಜಲಧಾರೆ ಕಾರ್ಯಕ್ರಮ ನಡೆಯುತ್ತಿದೆ ಅದು ಬೆಂಗಳೂರನ್ನು ತಲುಪಿ ಪೂರ್ಣಗೊಳಿಸಲಾಗುತ್ತದೆ. ೨೦೨೩ರ ಚುನಾವಣೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿಗಳನ್ನು ನೀವೆಲ್ಲರೂ ಗೆಲ್ಲಿಸಬೇಕು. ಮುಂದಿನ ಚುನಾವಣೆಯಲ್ಲಿ ನೂರಕ್ಕೆ ನೂರು ಜೆ,ಡಿ.ಎಸ್.ಪಕ್ಷ ಅಧಿಕಾರಕ್ಕೆ ಬಂದು ಕುಮಾರಣ್ಣ ಮುಖ್ಯಮಂತ್ರಿಯಾಗುತ್ತಾರೆ, ಎಲ್ಲಾ ಕಡೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇಂದು ಚಾಮರಾಜನಗರ ಗಡಿಬಾಗದ ವರೆಗೆ ಜಲಯಾತ್ರೆ ಬಂದಿದೆ, ನಿಮ್ಮೆಲ್ಲರ ಆಶೀರ್ವಾದ ಜೆ.ಡಿ.ಎಸ್. ಪಕ್ಷಕ್ಕೆ ಇರಲಿ ಎಂದರು.
ಚಾಮರಾಜನಗರ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಮಂಜುನಾಥ್ ಮಾತನಾಡಿ ರಾಜ್ಯದಲ್ಲಿ ನೀರಾವರಿಗೆ ಹೆಚ್ಚಿನ ಕೊಡುಗೆ ನೀಡಿದವರೆಂದರೆ ಮಾಜಿ ಪ್ರಧಾನಿ ದೇವೇಗೌಡರು. ರಾಜ್ಯವನ್ನು ಹಸಿರು ವಲಯವನ್ನಾಗಿಸಲು ಕನಸನ್ನು ಕಂಡಿರುವ ಕುಮಾರಣ್ಣ ಈ ಭಾರಿ ಮುಖ್ಯಮಂತ್ರಿಯಾಗಬೇಕು. ಕುಮಾರಣ್ಣ ನುಡಿದಂತೆ ನಡೆದವರು ಮುಖ್ಯಮಂತ್ರಿಯಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ ಆದ್ದರಿಂದ ಈ ಭಾರಿ ಜೆ.ಡಿ.ಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.