ಚಾಮರಾಜನಗರ: ಜಿಲ್ಲೆಯಲ್ಲಿ ನಡೆಯುವ ಜಾತ್ರಾಮಹೋತ್ಸವದ ಪೈಕಿ ಒಂದಾಗಿರುವ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಜಾತ್ರೆ ಮಾ.28ರಿಂದ ಆರಂಭವಾಗಿದ್ದು ಮಾ.31ರವರೆಗೆ ನಡೆಯಲಿದ್ದು, ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ರಥೋತ್ಸವ ಎಲ್ಲರ ಗಮನಸೆಳೆಯುತ್ತಿದ್ದು, ಎರಡು ವರ್ಷಗಳ ಬಳಿಕ ನಡೆಯುತ್ತಿರುವ ರಥೋತ್ಸವಕ್ಕೆ ಭಕ್ತರ ದಂಡು ದೌಡಾಯಿಸುತ್ತಿದೆ.
ಇನ್ನು ಈ ರಥದ ಬಗ್ಗೆ ಹೇಳಬೇಕೆಂದರೆ ಗುಂಡ್ಲುಪೇಟೆ ತಾಲ್ಲೂಕಿನ ಕಣ್ಣೇಗಾಲ ಹಾಗೂ ಗೋಪಾಲಪುರ ಗ್ರಾಮಸ್ಥರು ಕಾಡಿನಲ್ಲಿ ಸಿಗುವ ಬಿದರಿನ ಬಂಬು ಮತ್ತು ಹಗ್ಗದ ಬದಲು ಕಾಡಿನಲ್ಲಿ ಸಿಗುವ ಹಂಬುಗಳನ್ನು (ಬಳ್ಳಿ) ಬಳಸಿ ರಥ ಎಳೆಯುವುದು ಇಲ್ಲಿನ ವಿಶೇಷವಾಘಿದೆ ಅಷ್ಟೇ ಅಲ್ಲದೆ ರಥದ ಅಲಂಕಾರವೂ ಕಾಡಿನಲ್ಲಿ ಸಿಗುವ ಹೂಗಳಿಂದ ಮಾಡಲಾಗುತ್ತದೆ.
2020 ಹಾಗೂ 2021ರಲ್ಲಿ ಕೋವಿಡ್ ಕಾರಣಕ್ಕೆ ಜಾತ್ರೆ ಸರಳವಾಗಿ ನಡೆದಿತ್ತು. ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಭಕ್ತರಲ್ಲಿ ನಿರಾಸೆ ಮೂಡಿತ್ತು. ಈ ಬಾರಿ ಕೋವಿಡ್ ಪರಿಸ್ಥಿತಿ ತಿಳಿಯಾಗಿರುವುದರಿಂದ ಎಂದಿನಂತೆ ರಥೋತ್ಸವ ನಡೆಯುತ್ತಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಜನರ ಮಿತಿ ಮೀರಿದ ಚಟುವಟಿಕೆಗಳಿಗೆ ನಿರ್ಬಂಧವಿದೆ. ಹಾಗಾಗಿ, ಪರಿಸರ ಸಂರಕ್ಷಣೆಯ ಜೊತೆಗೆ ಧಾರ್ಮಿಕ ಆಚರಣೆಯನ್ನು ನಡೆಸುವುದು ಹಿಂದಿನಿಂದಲೂ ನಡೆದು ಬಂದಿದೆ.
ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ,ಆರೋಗ್ಯ ಇಲಾಖೆ ವತಿಯಿಂದ ಪ್ರಥಮ ಚಿಕಿತ್ಸಾ ಘಟಕ ತೆರೆಯಲಾಗಿದೆ. ಪ್ರಸಾದವನ್ನು ಪರೀಕ್ಷೆ ಮಾಡಿ ದೃಢೀಕರಿಸಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅರಣ್ಯ ಇಲಾಖೆಯವರು ಭಕ್ತರು ದೇವಸ್ಥಾನಕ್ಕೆ ಹೋಗಿ ಬರಲು ವಾಹನ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.ಭಕ್ತರಿಗೆ ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.