ಚಾಮರಾಜನಗರ : ತವರಿಂದ ವರದಕ್ಷಿಣೆ ತರದ ಹೆಂಡತಿಯನ್ನು ಗಂಡನೇ ಕೊಲೆ ಮಾಡಿ ನೇಣು ಹಾಕಿದ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೊತ್ತಲವಾಡಿ ಗ್ರಾಮದ ದೇವಪ್ಪ ಎಂಬುವರ ಪುತ್ರಿ ದಿವ್ಯಾ (22) ಎಂಬಾಕೆಯೇ ಗಂಡನ ವರದಕ್ಷಿಣೆ ದಾಹಕ್ಕೆ ಬಲಿಯಾದ ದುರ್ದೈವಿ.
ಈಕೆಯನ್ನು ಕಳೆದ ಒಂಬತ್ತು ತಿಂಗಳ ಹಿಂದೆಯಷ್ಟೆ ಉಡಿಗಾಲ ಗ್ರಾಮದ ಜಯಶಂಕರ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯ ವೇಳೆಯೇ ಪತಿ ಜಯಶಂಕರ್ ಕಡೆಯವರು ವರದಕ್ಷಿಣೆಯ ಡಿಮ್ಯಾಂಡ್ ಮಾಡಿದ್ದಲ್ಲದೆ, ಎರಡು ಲಕ್ಷ ರೂ. ನಗದು, ಚಿನ್ನಾಭರಣ, ಬೆಳ್ಳಿ ಪದಾರ್ಥಗಳನ್ನು ಪಡೆದಿದ್ದಲ್ಲದೆ, ಅದ್ಧೂರಿಯಾಗಿ ಮದುವೆ ಮಾಡಿಕೊಡುವಂತೆಯೂ ಬೇಡಿಕೆಯನ್ನಿಟ್ಟಿದ್ದರು.
ಜಯಶಂಕರ್ ಮನೆಯವರು ಮಾಡಿದ್ದ ಡಿಮ್ಯಾಂಡಿಗೆ ತಕ್ಕಂತೆ ಸಾಲಸೋಲ ಮಾಡಿ ದಿವ್ಯಾ ಮನೆಯವರು ಮದುವೆಯನ್ನು ಮಾಡಿಕೊಟ್ಟಿದ್ದರು. ಮದುವೆ ನಂತರ ದಿನ ಕಳೆದಂತೆ ದಿವ್ಯಾಳಿಗೆ ಹಿಂಸೆ ನೀಡುತ್ತಾ ತವರಿಂದ ಹಣ ತರುವಂತೆ ಒತ್ತಾಯಿಸಲು ಆರಂಭಿಸಿದ್ದನು. ಇದಕ್ಕೆ ಆತನ ತಂದೆ
ಸಿದ್ದಮಲ್ಲಪ್ಪ, ತಾಯಿ ಸುಂದ್ರಮ್ಮ, ಸಹೋದರ ಚಂದ್ರಶೇಖರ್, ಅತ್ತಿಗೆ ರೇಖಾ ಸಾಥ್ ನೀಡುತ್ತಿದ್ದರು ಎನ್ನಲಾಗಿದೆ.
ಈ ನಡುವೆ ದಿವ್ಯಾಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಮನೆಯ ಪಕ್ಕದ ಕೊಠಡಿಯಲ್ಲಿ ಪತ್ತೆಯಾಗಿದ್ದು, ಗಂಡ ಸೇರಿದಂತೆ ಮನೆಯವರೆಲ್ಲರೂ ನಾಪತ್ತೆಯಾಗಿದ್ದಾರೆ. ಮೃತಳ ಪೋಷಕರು ತನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ಪರಾರಿಯಾಗಿರುವುದಾಗಿ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.