ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ವಿವಿಧ ಉತ್ಸವ ಮತ್ತು ಸೇವೆಗಳು ಸೋಮವಾರದಿಂದ ಪುನರಾರಂಭಗೊಂಡಿದ್ದು, ಭಕ್ತರು ಆಗಮಿಸಿ ಮಲೆಮಹದೇಶ್ವರನ ದರ್ಶನ ಪಡೆದುಕೊಂಡರು.
ಕಳೆದ ಮೂರು ತಿಂಗಳ ಹಿಂದೆ ರಾಜ್ಯದಲ್ಲಿ ಕೋವಿಡ್ ಸಂಖ್ಯೆ ತಗ್ಗಿದ ಹಿನ್ನಲೆ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತಲ್ಲದೇ ವಿವಿಧ ಉತ್ಸವಗಳನ್ನು ಸಹ ಪುನರಾರಂಭಿಸಲು ಅವಕಾಶ ಮಾಡಿಕೊಡಲಾಗಿತ್ತು. ಅದರಂತೆಯೇ ಮಾದಪ್ಪನ ಸನ್ನಿಧಿಯಲ್ಲೂ ಉತ್ಸವಗಳನ್ನು ನೆರವೇರಿಸಲಾಗುತ್ತಿತ್ತು. ಆದರೆ ಕಳೆದ ತಿಂಗಳು ಕೋವಿಡ್ ಸಂಖ್ಯೆ ಹೆಚ್ಚಾದ ಹಿನ್ನಲೆ ಕರ್ಫ್ಯೂವನ್ನು ಜಾರಿಗೊಳಿಸಲಾಗಿತ್ತಲ್ಲದೇ ಜಿಲ್ಲಾಡಳಿತದ ಸೂಚನೆ ಮೇರೆಗೆ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ದೇವಸ್ಥಾನದಲ್ಲಿ ವಿವಿಧ ಉತ್ಸವದ ಸೇವೆಗಳನ್ನು ರದ್ದುಗೊಳಿಸಿ ಆದೇಶ ನೀಡಲಾಗಿತ್ತು.
ಇದೀಗ ಸರ್ಕಾರ ಕೋವಿಡ್ ಗೆ ಸಂಬಂಧಿಸಿದಂತೆ ಎಲ್ಲ ನಿರ್ಬಂಧಗಳನ್ನು ವಾಪಸ್ ಪಡೆದಿರುವುದರಿಂದ ಸೋಮವಾರದಿಂದ ಮಾದಪ್ಪನ ಸನ್ನಿಧಿಯ ಹೊರಾಂಗಣದಲ್ಲಿ ಚಿನ್ನದ ತೇರಿನ ಉತ್ಸವ, ಹುಲಿವಾಹನ, ರುದ್ರಾಕ್ಷಿ ವಾಹನ ಹಾಗೂ ಬಸವ ವಾಹನ ಉತ್ಸವದ ಸೇವೆಗಳು ಪುನರಾರಂಭವಾದವು.
ಜತೆಗೆ ದೇವಸ್ಥಾನದ ಒಳಾಂಗಣದಲ್ಲಿ ಜರುಗುವ ಮಹಾರುದ್ರಾಭಿಷೇಕ, ಪಂಚ ಕಳಸ ಸಮೇತ ನವರತ್ನ ಕಿರೀಟಧಾರಣೆ, ಏಕದಶವಾರ ರುದ್ರಾಭಿಷೇಕ, ಏಕವಾರ ರುದ್ರಾಭಿಷೇಕ, ಶಿವ ಅಷ್ಠೋತ್ತರ ಬಿಲ್ವಾರ್ಚನೆ, ಶಿವ ಸಹಸ್ರ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ಸೇರಿದಂತೆ ಇನ್ನಿತರೆ ಸೇವಾ ಉತ್ಸವಾದಿಗಳು ಆರಂಭವಾಗಿವೆ. ಈ ಸೇವೆಗಳಿಗೆ ಪ್ರಾಧಿಕಾರದ ಆಡಳಿತ ಕೋವಿಡ್ ನಿಯಮವನ್ನು ಪಾಲಿಸುವುದರ ಮೂಲಕ ಎಲ್ಲ ಸೇವೆಗಳನ್ನು ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಿದೆ.
ಅಮಾವಾಸ್ಯೆಯ ಹಿನ್ನಲೆ ಮಾದಪ್ಪನ ಸನ್ನಿಧಿಯಲ್ಲಿ ಜರುಗುವ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುವ ದಿಸೆಯಲ್ಲಿ ಕಳೆದ 2 ದಿನಗಳಿಂದ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದು, ದೇವರ ದರ್ಶನ ಪಡೆಯುವುದರ ಮೂಲಕ ಮಹದೇಶ್ವರಬೆಟ್ಟದಲ್ಲಿ ಬೀಡು ಬಿಟ್ಟಿದ್ದರು. ಸೋಮವಾರದಿಂದ ಪುನರಾರಂಭವಾದ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನದ ಉತ್ಸವಗಳ ಸೇವೆಗಳಲ್ಲಿ ಭಾಗಿಯಾಗಿದ್ದರು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ಈ ವೇಳೆ ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುವುದರ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು.