ಚಾಮರಾಜನಗರ: ಮುಂದಿನ ಒಂದು ವರ್ಷ ನಾನು ರಾಜಕೀಯ ಮಾಡುವುದಿಲ್ಲ. ಸರ್ಕಾರದ ಯೋಜನೆಗಳನ್ನು ಜಿಲ್ಲೆಯ ಬಡ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಉಸ್ತುವಾರಿ ಸಚಿವರಾದ ಬಳಿಕ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು 15 ತಿಂಗಳು ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ಇನ್ನೊಂದು ಆರು ತಿಂಗಳು ಎಲ್ಲವನ್ನೂ ಬಿಟ್ಟು ಬಿಡಿ. ಜಿಲ್ಲೆಯ ಬಗ್ಗೆ ಮಾತನಾಡಿ. 10–15 ದಿನದಲ್ಲಿ ಏನೇನೋ ಕೆಲಸ ಆರಂಭಿಸಬೇಕು ಎಂದಿದ್ದೇನೆ. ನನಗೆ ಸಲಹೆ ಕೊಡಿ. ನನ್ನಿಂದ ಕೆಲಸ ಮಾಡಿಸಿಕೊಳ್ಳಿ ಎಂದರು. ಹನೂರಿಗೆ ತಾಲ್ಲೂಕು ಭವನ ಆಗಬೇಕಿದೆ. ಕೊಳ್ಳೇಗಾಲ ಬೆಳೆಯುತ್ತಿದೆ. ಜಿಲ್ಲಾ ಕೇಂದ್ರ ಚಾಮರಾಜನಗರ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಕೈಗಾರಿಕೆಗಳು, ಗಾರ್ಮೆಂಟ್ಸ್ ಬರಬೇಕಿದೆ ಎಂದು ಹೇಳಿದರು.
ಇದೇ ವೇಳೆ 17 ಜನ ಕಾಂಗ್ರೆಸ್, ಜೆಡಿಎಸ್ ಶಾಸಕರ ಆಪರೇಷನ್ ಮಾಡಲು ರಮೇಶ್ ಜಾರಕಿಹೊಳಿ ಹೊರಟಿದ್ದಾರೆ ಎಂಬ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬುದ್ದಿವಂತ, ಕಾಂಗ್ರೆಸ್ನವರು ಏನು ಮಾಡುತ್ತಾರೋ ಅದನ್ನು ತಾನೂ ಮಾಡಬೇಕು ಎಂಬ ಹಠ ಇದೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಆಯಾ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಸಚಿವರು ಆಗುವುದು ಬೇಡ ಎಂಬ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರಿಗೂ ಬೇರೆ ಬೇರೆ ಜಿಲ್ಲೆ ಕೊಟ್ಟಿದ್ದಾರೆ. ನನಗೆ ಚಾಮರಾಜನಗರ ಕೊಟ್ಟಿದ್ದಾರೆ. ನನಗೆ ರಾಜಕಾರಣದಲ್ಲಿ 40 ವರ್ಷ ಅನುಭವವಿದೆ. ಜಿಲ್ಲೆಯ ಬಗ್ಗೆಯೂ ಗೊತ್ತಿದೆ ಹೀಗಾಗಿ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ಈ ಸಂದರ್ಭ ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ನಗರಸಭೆ ಸದಸ್ಯೆ ಕವಿತಾ, ಜಿ.ಪಿ.ಶಿವಕುಮಾರ್, ಮಧುಚಂದ್ರ, ಕಿನಕಳ್ಳಿ ರಾಚಯ್ಯ, ಶೇಖರ್ ಬುದ್ದ, ಬಿಜೆಪಿ ಟೌನ್ ಅಧ್ಯಕ್ಷ ಲಕ್ಷ್ಮೀಪತಿ ಇದ್ದರು.