ಚಾಮರಾಜನಗರ: ಕಳೆದ ಆರು ವರ್ಷಗಳಿಂದ ನಡೆಯದೆ ನಿಂತು ಹೋಗಿದ್ದ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥನ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಈ ಬಾರಿ ನೂತನ ರಥದಲ್ಲಿ ಮೊದಲ ಬ್ರಹ್ಮರಥೋತ್ಸವ ಜರುಗಿದ್ದು ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಸಹಸ್ರಾರು ಭಕ್ತರು ಭವ್ಯ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ನಿಗಧಿತ ಸಮಯಕ್ಕೆ ಸರಿಯಾಗಿ ಬಿಳಿಗಿರಿರಂಗನಾಥನ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕುಳ್ಳರಿಸಿ ರಥ ಎಳೆಯುವ ಮೂಲಕ ಭಕ್ತರು ಪುನೀತರಾದರು. ಎಲ್ಲರೂ ಗೋವಿಂದ ಗೋವಿಂದ ಎನ್ನುವ ನಾಮ ಸ್ಮರಣೆ ಮಾಡುತ್ತಿದ್ದದ್ದು ಕಂಡು ಬಂತು.
ಬಿಳಿಗಿರಿರಂಗನ ಬೆಟ್ಟದಲ್ಲಿ ಶನಿವಾರ ರಥೋತ್ಸವ ನಡೆಯುವ ಹಿನ್ನಲೆಯಲ್ಲಿ ಯಳಂದೂರು ಮಾರ್ಗವಾಗಿ ಬರುವ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿತ್ತು. ಆದರೆ ಖಾಸಗಿ ವಾಹನಗಳಲ್ಲಿ ಬಂದ ಸಾರ್ವಜನಿಕರಿಗೂ ಪೊಲೀಸ್ ಅಧಿಕಾರಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದ ಹಿನ್ನಲೆಯಲ್ಲಿ ಖಾಸಗಿ ವಾಹನಗಳು ಎಂದಿನಂತೆ ಬೆಟ್ಟಕ್ಕೆ ಸಂಚಾರ ಮಾಡಿದ್ದು, ಟ್ರಾಫಿಕ್ ಜಾಮ್ ಆಗಲು ಕಾರಣವಾಗಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜು ರವರು ಆಗಮಿಸಿ ಟ್ರಾಫಿಕ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ . ಈ ನಡುವೆ ಬೆಟ್ಟದ ಕಿರುದಾದ ರಸ್ತೆಯಲ್ಲಿ ಖಾಸಗಿ ವಾಹನಗಳ ಜೊತೆ ಕೆ.ಎಸ್. ಆರ್. ಟಿ .ಸಿ ಬಸ್ ಸಂಚಾರ ಮಾಡಿದ್ದರಿಂದ ಖಾಸಗಿ ಬಸ್ ವೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಷಾತ್ ಯಾರಿಗೂ ತೊಂದರೆಯಾಗಲಿಲ್ಲ.