ಚಾಮರಾಜನಗರ: ರಂಜಾನ್ ಹಬ್ಬದ ದಿನವೇ ಎರಡು ಗುಂಪುಗಳ ನಡುವೆ ಘಷ೯ಣೆ ಏರ್ಪಟ್ಟಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮಾರಾಮಾರಿ ನಡೆದಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸಕಾಲಕ್ಕೆ ಪೊಲೀಸರ ಆಗಮನದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಸಾಮಂದಗೇರಿ ಬೀದಿಯ ನಿವಾಸಿ ನಾಸೀರ್ ಷರೀಫ್ (ಬಬ್ಲು) ಹಾಗೂ ಮಾಜಿ ಸದಸ್ಯ ಕಿಜರ್ ಬೆಂಬಲಿಗರ ನಡುವೆ ಬಡಿದಾಟ ನಡೆದಿದ್ದು 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಬ್ಬದ ಹಿನ್ನಲೆ ಮಸೀದಿಗೆ ತೆರಳಿ ಪ್ರಾರ್ಥನೆ ಮುಗಿಸಿ ಬಂದು ಮನೆಗೆ ಹಿಂದಿರುಗುವಾಗ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು ಸಾಮಂದೇರಿ ಬೀದಿಯ ಎರಡು ಗುಂಪಿನ ಯುವಕರು ಇಟ್ಟಿಗೆ, ಕಲ್ಲು ದೊಣ್ಣೆಯಿಂದ ಬಡಿದಾಡಿಕೊಂಡಿದ್ದಾರೆ.
ಗಲಾಟೆ ಗುಂಪನ್ನು ನೋಡಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹೊಡೆದಾಟದಲ್ಲಿ ತೊಡಗಿದ್ದವರನ್ನು ಚದುರಿಸಿದ್ದಾರೆ. ಬಡಿದಾಟದಲ್ಲಿ ಪೆಟ್ಟು ತಿಂದು ಕಿಜರ್ ಹಾಗೂ ನಾಸೀರ್ ಷರೀಫ್ ಸೇರಿದಂತೆ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಕೆಲ ಮುಸ್ಲಿಂ ಯುವಕರು ನ್ಯಾಯ ಬೇಕೆಂದು ಒತ್ತಾಯಿಸಿ ಆಸ್ಪತ್ರೆ ಆವರಣದಲ್ಲಿ ಧರಣಿ ಕೂರಲು ಮುಂದಾದ ವೇಳೆ ಪಿ.ಎಸ್.ಐ ಚೇತನ್ ಮಧ್ಯ ಪ್ರವೇಶಿಸಿ ಯುವಕರನ್ನು ಮನವೊಲಿಸಿದ್ದು ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆಗೆ ಒಳಪಡಿಸೋಣ, ನಿಮ್ಮ ಒತ್ತಾಯ ಏನೇ ಇದ್ದರು ದೂರು ನೀಡುವಂತೆ ತಿಳಿಸಿ ಮನವೊಲಿಸಿದರು.
ಘಟನೆಯಿಂದ ಎಚ್ಚೆತ್ತ ಪೊಲೀಸರು ಮುಸ್ಲಿಂ ಬಡಾವಣೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಗಲಾಟೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.