ಚಾಮರಾಜನಗರ : ಕೆಲ ತಿಂಗಳ ಹಿಂದೆಯಷ್ಟೇ ಗಣಿಗಾರಿಕೆ ವೇಳೆ ಗುಡ್ಡ ಕುಸಿಗೊಂಡು ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಆ ಘಟನೆ ಇನ್ನು ಹಸಿರಾಗಿರುವಾಗಲೇ ಅಂತಹದೊಂದು ದುರಂತ ಮುಂದೆ ನಡೆಯಲು ಆಹ್ವಾನ ಮಾಡಿಕೊಡುತ್ತಿರುವುದು ಕಂಡು ಬರುತ್ತದೆ.
ಕಾರಣ ಸದ್ಯ ಮಡಹಳ್ಳಿಯಲ್ಲಿ ದುರಂತ ನಡೆದ ಬಳಿಕ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದ್ದು, ಇದೀಗ ಗಣಿಮಾಲೀಕರ ಕಣ್ಣು ಪಕ್ಕದ ಕೂತನೂರು ಗ್ರಾಮದಲ್ಲಿರುವ ಗೋಮಾಳ ಪ್ರದೇಶ ಸರ್ವೇ ನಂಬರ್ 368ರತ್ತ ಬಿದ್ದಿಗೆ. ಅಲ್ಲಿನ ಗುಡ್ಡದಲ್ಲಿ ಬಿಳಿಕಲ್ಲು ಗಣಿಗಾರಿಕೆ ಆರಂಭಿಸಿದ್ದಾರೆ. ಇದು ಸ್ಥಳೀಯ ಗ್ರಾಮಸ್ಥರ ನಿದ್ದೆ ಗೆಡಿಸಿದ್ದು, ಆಕ್ರೋಶಗಳು ವ್ಯಕ್ತವಾಗಿವೆ.
ಸಧ್ಯ ಆರಂಭವಾಗಿರುವ ಕೂತನೂರು ಗಣಿ ಪ್ರದೇಶದ ಸುತ್ತಮುತ್ತಲ ರೈತರ ಗೋಳು ಕೇಳೋರೆ ಇಲ್ಲದಂತಾಗಿದೆ. ಸರ್ವೇ ನಂಬರ್ 368 ಸರ್ಕಾರಿ ಗೋಮಾಳ ಪ್ರದೇಶವಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರು ಜಾನುವಾರಗಳನ್ನು ಮೇಯಿಸಲು ಅಲ್ಲಿಗೆ ಹೋಗುತ್ತಿದ್ದರು. ಅಲ್ಲದೆ, ಗುಡ್ಡದ ಬಳಿ ನೀರಿನ ಕಟ್ಟೆ ಇರುವುದರಿಂದ ಜಾನುವಾರಗಳಿಗೆ ಬಿಸಿಲ ಸಮಯದಲ್ಲಿ ಕುಡಿಯಲು ನೀರು ಸಿಗುತ್ತಿತ್ತು, ಸದ್ಯ ಗಣಿಕಾರಿಕೆ ಆರಂಭವಾಗಿ ಗುಡ್ಡದ ಬಳಿ ತೆರಳಲು ರೈತರು ಭಯಪಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸುತ್ತಮುತ್ತ ವ್ಯವಸಾಯ ಮಾಡುವ ರೈತರು ಬೆಳೆದ ಬೆಳೆಯನ್ನು ರಕ್ಷಣೆ ಮಾಡುವುದು ಹೇಗೆ ಎಂದು ಯೋಚಿಸುವಂತಾಗಿದೆ. ಗುಡ್ಡದ ಸುತ್ತಲ ಪ್ರದೇಶ ಕಾಡು ಪ್ರಾಣಿಗಳ ವಾಸಸ್ಥಳವಾಗಿದ್ದು, ಗಣಿಕಾರಿಕೆ ಶಬ್ದಕ್ಕೆ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುವ ಭೀತಿಯೂ ಗ್ರಾಮಸ್ಥರನ್ನು ಕಾಡುತ್ತಿದೆ.
ಈ ಬಗ್ಗೆ ತಾಲೂಕು ತಹಶೀಲ್ದಾರ್ ಅವರಿಗೆ ಕೂತನೂರು ಗ್ರಾಮಸ್ಥರು ದೂರು ನೀಡಿದ್ದರೂ ಸಹ ತಾಲೂಕು ಆಡಳಿತ ಇನ್ನೂ ಸಹ ಯಾವ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಕಲ್ಲು ಸಾಗಾಟ ಮಾಡುವ ಟಿಪ್ಪರ್ ವಾಹನಗಳು ಓವರ್ ಲೋಡ್ ಮಾಡಿಕೊಂಡು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.