ಚಾಮರಾಜನಗರ: ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬುದು ಹಿಂದಿನಿಂದಲೂ ಪ್ರಚಲಿತದಲ್ಲಿರುವ ಮಾತಾಗಿದೆ. ಅದೇ ರೀತಿ ಸರ್ಕಾರ ಬಡವರ ಅಭಿವೃದ್ಧಿಗೆ ಹತ್ತಾರು ಯೋಜನೆ ಜಾರಿಗೆ ತಂದರೂ ಅದು ಅವರಿಗೆ ತಲುಪಬೇಕಾದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡುವುದು ಅನಿವಾರ್ಯವಾಗಿದೆ.
ಇದಕ್ಕೆ ನಿದರ್ಶನ ಎನ್ನುವಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರೊಬ್ಬರು ತಲಾ 2 ಸಾವಿರ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದ್ದು ಸ್ವತಃ ಫಲಾನುಭವಿಗಳೇ ಹಣ ಕೊಡ್ಬೇಕು ಅಂಥ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ.
ಕಳೆದ ವಾರವಷ್ಟೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರು ಅರ್ಹ 35 ಫಲಾನುಭವಿಗಳಿಗೆ ಪಂಪ್ ಸೆಟ್ ಪರಿಕರಗಳನ್ನ ವಿತರಿಸಿ ತೆರಳಿದ ಬಳಿಕ ಇತ್ತ ಅಧಿಕಾರಿ ತಮ್ಮ ಕೈಚೆಳಕ ಶುರು ಮಾಡಿದ್ದು ಅದಕ್ಕೆ ಸಾಕ್ಷಿಯಾಗಿ ಫಲಾನುಭವಿ ರೈತನಿಂದ ಹಣ ಪಡೆದುಕೊಳ್ಳುತ್ತಿರುವ ದೃಶ್ಯವೂ ಬಯಲಾಗಿದೆ.
ವರ್ಷಾನುಗಟ್ಟಲೆ ಬೋರ್ ವೆಲ್ ಕೊರೆಯಿಸಿ ಪರಿಕರಗಳಿಲ್ಲದೆ ಕಾದು ಕುಳಿತ್ತಿದ್ದ ರೈತನಿಗೆ ಸರ್ಕಾರ ಸೌಲಭ್ಯ ಒದಗಿಸಿದರೂ ಅದನ್ನು ಪಡೆಯಬೇಕಾದರೆ ಕಮೀಷನ್ ರೂಪದಲ್ಲಿ ರೈತರು ಹಣ ನೀಡಬೇಕಾಗಿರುವುದು ಬೇಸರದ ಸಂಗತಿಯಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರು ಪಂಪ್ ಸೆಟ್ ಗೆ ಬೇಕಾದ ಪರಿಕರಗಳನ್ನು ಪಡೆಯಲ 2 ಸಾವಿರ ಹಣವನ್ನ ಸಾಲ ಮಾಡಿ ತಂದುಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.