ಚಾಮರಾಜನಗರ: ನಿರ್ಜನ ಪ್ರದೇಶದಲ್ಲಿ ಚಲಿಸುವ ಕಾರುಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಿನಲ್ಲಿದ್ದವರಿಗೆ ಮಾರಕಾಯುಧ ತೋರಿಸಿ ಹೆದರಿಸಿ ಅವರಿಂದ ಹಣ, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಭರತ್, ಹನುಮೇಗೌಡ, ಬಂಗಾರಪೇಟೆಯ ಕಿರಣ್, ತುಮಕೂರಿನ ಪ್ರತಾಪ್ ಬಂಧಿತ ಆರೋಪಿಗಳು. ಇವರುಗಳು ಈ ಹಿಂದೆ ಗ್ಯಾಂಗ್ ವಾರ್ಗಳಲ್ಲಿ ಭಾಗಿಯಾಗಿದ್ದವರಾಗಿದ್ದು, ತಮ್ಮ ಊರು ಬಿಟ್ಟು ಬೇರೆಡೆ ತೆರಳಿ ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು ತಡೆದು ಸುಲಿಗೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದರು.
ಈ ನಡುವೆ ತಮಿಳುನಾಡು ಮೂಲದ ಶಿವ ಮತ್ತು ದಿನೇಶ್ ಎಂಬುವರು ಕೇರಳದಿಂದ ಕೊಳ್ಳೇಗಾಲ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರನ್ನು ಕೊಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಧುವನಹಳ್ಳಿ ಬಳಿ ಅಡ್ಡಗಟ್ಟಿದ ಸುಲಿಗೆಕೋರರು ಎಂಟು ಸಾವಿರ ನಗದು ಮತ್ತು ರೆಡ್ ಮಿ ಫೋನನ್ನು ಕಸಿದು ಕಾರಿನ ಗಾಜನ್ನು ಒಡೆದು ಪರಾರಿಯಾಗಿದ್ದರು.
ಈ ಬಗ್ಗೆ ಶಿವ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್ ಪಿ ಅವರ ಮಾರ್ಗದರ್ಶನದಂತೆ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್, ಪಿಎಸ್ ಐ ಗಳಾದ ಆರ್.ಮಂಜುನಾಥ್, ವೀರಣ್ಣಾರಾಧ್ಯ ಮತ್ತು ವಿ.ಚೇತನ್ ಅವರನ್ನೊಳಗೊಂಡ ತಂಡ ರಚಿಸಿ ತನಿಖೆ ಪ್ರಾರಂಭಿಸಲಾಗಿತ್ತು.
ಕಳೆದ ಒಂದೂವರೆ ತಿಂಗಳ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಬಂಗಾರಪೇಟೆ, ದೇವನಹಳ್ಳಿ, ರಾಜಾನುಕುಂಟೆ ಮತ್ತು ತುಮಕೂರಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.