ಚಾಮರಾಜನಗರ: ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿ ಮಹಿಳೆ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಭದ್ರೇನಹಳ್ಳಿಯ ರಸ್ತೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಬಗೆರೆ ಗ್ರಾಮದ ಕೃಷ್ಣ ಎಂಬುವರ ಪತ್ನಿ ಚಂದ್ರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೌದಳ್ಳಿ ಗ್ರಾಮದ ದಾದಿ ಸುಮತಿ ಆಸ್ಪತ್ರೆಗೆ ಕರೆದೊಯ್ಯುವಾಗ ಹೆರಿಗೆ ನೋವು ಹೆಚ್ಚಾಗಿ ಆ್ಯಂಬುಲೆನ್ಸ್ನಲ್ಲೇ ಚಂದ್ರಮ್ಮ ಮಗುವಿಗೆ ಜನ್ಮ ನೀಡಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆಂದು ಆ್ಯಂಬುಲೆನ್ಸ್ ಚಾಲಕ ಲಿಂಗರಾಜು ಹಾಗೂ ಆರೋಗ್ಯ ಸಿಬ್ಬಂದಿ ನಾಗರಾಜು ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಕಳೆದ 4 ದಿನಗಳಲ್ಲಿ ಮೂರು ಹೆರಿಗೆಗಳು ಆ್ಯಂಬುಲೆನ್ಸ್ನಲ್ಲೇ ನಡೆದಿದ್ದು, ಎಲ್ಲ ಪ್ರಕರಣಗಳಲ್ಲೂ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಮೂರು ಪ್ರಕರಣಗಳಲ್ಲಿ ಎರಡು ಪ್ರಕರಣ ಕೌದಳ್ಳಿ ಭಾಗಕ್ಕೆ ಸೇರಿದ್ದಾಗಿವೆ.
ಈ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ ಮತ್ತು ಗರ್ಭಿಣಿ ಮಹಿಳೆಯರಿಗೆ ಸಮರ್ಪಕವಾದ ಮಾಹಿತಿ ಇಲ್ಲದಿರುವುದು, ರಸ್ತೆ, ವಾಹನ ಸೌಲಭ್ಯದ ಕೊರತೆಯೂ ಇದಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು