ಕೊಳ್ಳೇಗಾಲ: ಇಲ್ಲಿನ ಶಾಸಕ ಎನ್.ಮಹೇಶ್ ಬೆಂಗಳೂರಿನಲ್ಲಿ ಆ.5ರಂದು ಬಿಜೆಪಿಗೆ ಸೇರಲಿದ್ದಾರೆ.
2018ರ ಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಮಹೇಶ್ ಅವರು, ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಾಲ್ಕು ತಿಂಗಳು ಶಿಕ್ಷಣ ಸಚಿವರಾಗಿದ್ದರು. ನಂತರ ರಾಜೀನಾಮೆ ನೀಡಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡುವಾಗ ಕಲಾಪಕ್ಕೆ ಗೈರಾಗಿದ್ದಕ್ಕಾಗಿ ಅವರನ್ನು ಬಿಎಸ್ಪಿಯಿಂದ ಉಚ್ಚಾಟಿಸಲಾಗಿತ್ತು. ಆ ಬಳಿಕ ಬಿಜೆಪಿಗೆ ಹತ್ತಿರವಾಗಿದ್ದರು.
ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ ಹಾಗೂ ಸ್ವತಃ ಮಹೇಶ್ ಅವರು ಭಾನುವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸೇರ್ಪಡೆ ವಿಚಾರ ಪ್ರಕಟಿಸಿದರು.