ಗುಂಡ್ಲುಪೇಟೆ: ಬುಲೆಟ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಗೆ ಬೆಂಕಿ ತಗುಲಿ ಉರಿದಿದ್ದಲ್ಲದೆ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766ರ ಬೇಗೂರು ಠಾಣಾ ಸರಹದ್ದಿನ ವ್ಯಾಪ್ತಿಯ ತಗ್ಗಲೂರು ಬಳಿ ನಡೆದಿದೆ.
ಮೃತಪಟ್ಟ ಸವಾರ ಕೇರಳ ಮೂಲದ ಜಾರ್ಜ್ ಕುಟ್ಟಿ ಜೇಮ್ಸ್(28) ಎಂದು ಗುರುತಿಸಲಾಗಿದ್ದು, ದೇಹವನ್ನು ಬೇಗೂರು ಆಸ್ಪತ್ರೆ ಯ ಶವಾಗಾರದಲ್ಲಿರಿಸಲಾಗಿದೆ.
ಕಾರಿನಲ್ಲಿದ್ದವರು ಕನಕಪುರದ ಯುವ ಜೋಡಿಗಳಾಗಿದ್ದು, ಕನಕಪುರದಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯ ತಗ್ಗಲೂರು ಬಳಿ ಬುಲೆಟ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಪರಿಣಾಮ ಬುಲೆಟ್ ಗೆ ಬೆಂಕಿ ತಗುಲಿದೆ. ಗಂಭೀರ ಗಾಯಗೊಂಡ ಸವಾರ ಜೇಮ್ಸ್ ಸಾವನ್ನಪ್ಪಿದರೆ, ಕಾರಿನಲ್ಲಿದ್ದವರಿಗೆ ಅಪಘಾತದಿಂದ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.