ಶಿವಮೊಗ್ಗ : ಸಾವು ಹೇಗೆ? ಯಾವ ರೂಪದಲ್ಲಿ ಬರುತ್ತೆ? ಎಂದು ಊಹಿಸಲೂ ಕಷ್ಟ. ಅನಾರೋಗ್ಯಕ್ಕೀಡಾದ ತಾಯಿಯನ್ನ ನೋಡಲೆಂದು ಪತ್ನಿ ಜತೆ ಕಾರಿನಲ್ಲಿ ಹೊರಟವನಿಗೆ ಮಾರ್ಗಮಧ್ಯೆಯೇ ಹಾವಿನ ರೂಪದಲ್ಲಿ ಎದುರಾದ ಜವರಾಯ, ಪತ್ನಿಯ ಪ್ರಾಣ ಹೊತ್ತೊಯ್ದಿದ್ದಾನೆ.
ಇಂತಹ ಭಯಾನಕ ಘಟನೆ ಶಿವಮೊಗ್ಗದ ಗಾಜನೂರು ಬಳಿ ಇಂದು(ಗುರುವಾರ) ಬೆಳಗಿನ ಜಾವ ಸಂಭವಿಸಿದೆ. ಶಿವಮೊಗ್ಗದ ಚೇತನ್ ಕುಮಾರ್ ಪತ್ನಿ ಸುಷ್ಮಾ(28) ಮೃತ ದುರ್ದೈವಿ. ತಾಯಿಯ ಆನಾರೋಗ್ಯದ ವಿಚಾರ ತಿಳಿದು ತಡರಾತ್ರಿಯೇ ತುಮಕೂರಿಗೆ ಕಾರಿನಲ್ಲಿ ಪತ್ನಿ ಜತೆ ಚೇತನ್ ಹೊರಟ್ಟಿದ್ದರು. ಗಾಜನೂರು ಬಳಿ ತುಂಗಾ ಎಡದಂಡೆ ನಾಲೆಯ ಪಕ್ಕದ ರಸ್ತೆಯಲ್ಲಿ ತೆರಳುವ ವೇಳೆ ಕಾರಿಗೆ ಹಾವು ಅಡ್ಡ ಬಂದಿದೆ. ಕೂಡಲೇ ಹಾವಿನ ಮೇಲೆ ಕಾರು ಹರಿಯುವುದನ್ನ ತಡೆಯಲು ಏಕಾಏಕಿ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿದೆ.
ಕಾರಿನೊಳಗೆ ನೀರು ತುಂಬಿದ್ದರಿಂದ ಸುಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬದುಕುಳಿದ ಚೇತನ್ ಕುಮಾರ್, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸಹಾಯಕ್ಕೆ ಕೂಗುವ ಧ್ವನಿ ಕೇಳಿದರೂ ಭಯದಿಂದ ಸ್ಥಳೀಯರು ಮನೆಯಿಂದ ಆಚೆ ಬಂದಿಲ್ಲ. ಶಬ್ಧದ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಸ್ಥಳೀಯರು ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ನಾಲೆಯಲ್ಲಿ ಕಾರು ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರು ಮತ್ತು ಸ್ಥಳೀಯರಿಂದ ಚೇತನ್ ಅವರನ್ನ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.