ಚಾಮರಾಜನಗರ: ಕೇರಳದ ಭಯೋತ್ಪಾದನಾ ನಿಗ್ರಹ ದಳವು ವಯನಾಡಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ರಾಜ್ಯದ ಇಬ್ಬರು ನಕ್ಸಲಿಯರು ಸೆರೆ ಸಿಕ್ಕಿದ್ದಾರೆ.
ಪಶ್ಚಿಮ ಘಟ್ಟವಲಯ ಸಮಿತಿಯ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬನಿದಳಂ ಕೇಡರ್ನ ಸಾವಿತ್ರಿ ಸೆರೆ ಸಿಕ್ಕವರಾಗಿದ್ದು, ಇವರನ್ನು ಡಿ.9 ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೇರಳದ ಭಯೋತ್ಪಾದನಾ ನಿಗ್ರಹ ದಳವು ಕರ್ನಾಟಕ ಮತ್ತು ಕೇರಳದ ವಯನಾಡು ಗಡಿ ಪ್ರದೇಶದ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಸುಲ್ತಾನ್ ಬತ್ತೇರಿಯ ಆಸ್ಪತ್ರೆಗೆ ಅನಾರೋಗ್ಯ ನಿಮಿತ್ತ ನಕ್ಸಲ್ ಸಾವಿತ್ರಿ ಬಂದಿರುವ ಖಚಿತ ಮಾಹಿತಿ ಮೇರೆಗೆ ಎಟಿಎಸ್ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ವೇಳೆ ಸಾವಿತ್ರಿ ಮತ್ತು ಜತೆಗಿದ್ದ ಬಿ.ಜಿ.ಕೃಷ್ಣಮೂರ್ತಿ ಸಿಕ್ಕಿಬಿದ್ದಿದ್ದಾರೆ.
ಇನ್ನು ಕೇರಳ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ನಕ್ಸಲರು ಪಶ್ಚಿಮ ಘಟ್ಟ ಉಳಿಸಿ ಹೋರಾಟ, ಕುದುರೆಮುಖ ಉಳಿಸಿ ಮುಂತಾದ ಚಳವಳಿ ಮೂಲಕ ಪ್ರವರ್ಧಮಾನಕ್ಕೆ ಬಂದ ಬಳಿಕ ಇವರು ನಕ್ಸಲ್ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕೇರಳದ ವಯನಾಡಿನಲ್ಲಿ ಇಬ್ಬರು ನಕ್ಸಲರ ಬಂಧನ ಪ್ರಕರಣ ಹಿನ್ನೆಲೆ ರಾಜ್ಯದಲ್ಲೂ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರಿನ ಕಳಸ, ಶೃಂಗೇರಿ, ಶಿವಮೊಗ್ಗದ ತೀರ್ಥಹಳ್ಳಿಯಲ್ಲೂ ಪರಿಶೀಲನೆ ನಡೆಸಿರುವ ಎನ್ಐಎ ತಂಡ ಹಲವಾರು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವ ವೇಳೆ ಕೃಷ್ಣಮೂರ್ತಿ ಬಂಡವಾಳಶಾಹಿ ತೊಲಗಲಿ, ಮಾವೋವಾದಕ್ಕೆ ಜಯವಾಗಲಿ, ನಮಗೇ ಜಯ, ಬಂಡವಾಳಶಾಹಿಗಳಿಗೆ ಧಿಕ್ಕಾರ ಎಂಬ ಜಯಘೋಷಗಳನ್ನು ಕೂಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ನಕ್ಸಲ್ ಕೃಷ್ಣಮೂರ್ತಿ ಕರ್ನಾಟಕದ ನಕ್ಸಲ್ ನಾಯಕನಾಗಿದ್ದು, ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಭುವನಹೂಡ್ಲು ಗ್ರಾಮದವನು. ಆರಂಭದಲ್ಲಿ ಈತ ಪಶ್ಚಿಮಘಟ್ಟ ಉಳಿಸಿ, ಕುದುರೆಮುಖ ಉಳಿಸಿ ಹೋರಾಟಗಳ ಮೂಲಕ ಬೆಳೆದು ಬಂದಿದ್ದು,. ಹೋರಾಟಗಾರ್ತಿ ಪ್ರಭಾ ಎಂಬಾಕೆಯನ್ನು ವಿವಾಹವಾಗಿದ್ದನು.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗೆ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ ಕೇರಳಕ್ಕೆ ಪಲಾಯನ ಮಾಡಿ ಅಲ್ಲಿ ಚಳವಳಿಯನ್ನು ರೂಪಿಸುತ್ತಿದ್ದರು. ಈತನ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.