ಮೈಸೂರು: ಬಿಎಸ್ಎನ್ಎಲ್ ಉಳಿಯಬೇಕಾದರೆ ಜಿಯೋ, ಏರ್ಟೆಲ್ನಂತಹ ದೈತ್ಯ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ತನ್ನ ಸೇವೆಗಳನ್ನು ತ್ವರಿತವಾಗಿ ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದ ಭಾರತ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್) ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಸಲಹಾ ಮಂಡಳಿ ಸಭೆಯ ಅಧಕ್ಷತೆವಹಿಸಿ ಮಾತನಾಡಿದ ಅವರು, ಬಿಎಸ್ಎಲ್ನಿಂದ ಸಮರ್ಪಕ ಸೇವೆಗಳು ದೊರೆಯುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಗ್ರಾಹಕರು ಜಿಯೋ, ಏರ್ಟೆಲ್, ಐಡಿಯಾದಂತಹ ಸೂಪರ್ ಫಾಸ್ಟ್ ನೆಟ್ವರ್ಕ್ ಸೇವೆಗಳ ಕಡೆ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಿಎಸ್ಎನ್ಎಲ್ ಕೂಡ ಇಂದಿನ ಕಾಲಕ್ಕೆ ಅನುಗುಣವಾಗಿ ಸೂಪರ್ ಫಾಸ್ಟ್ ನೆಟ್ವರ್ಕ್ ಸೇರಿದಂತೆ ಇತರೆ ಸೇವೆಗಳನ್ನು ಮೇಲ್ದರ್ಜೆಗೆ ಏರಿಕೆ ಮಾಡುವ ಬಗ್ಗೆ ಆದಷ್ಟು ಬೇಗ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರ, ಕೊಡಗು, ಎಚ್.ಡಿ.ಕೋಟೆಯಂತಹ ಹಿಂದುಳಿದ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟವರ್ ಕಂಬಗಳನ್ನು ಸ್ಥಾಪಿಸಬೇಕು. ಮೈಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ ಅಷ್ಟೇನೂ ಇಲ್ಲದಿರುವುದರಿಂದ ಹಿಂದುಳಿದ ತಾಲೂಕುಗಳ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಿದರೆ, ಹೆಚ್ಚು ಗ್ರಾಹಕರು ಸಿಗುತ್ತಾರೆ. ಇದರಿಂದ ಸಂಸ್ಥೆಗೆ ಹೆಚ್ಚು ವರಮಾನವೂ ಬರುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಭಾರತ್ನೆಟ್ ಉದ್ಯಮಿ ಯೋಜನೆಯಡಿ ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ನ್ಯಾಯಬೆಲೆ ಅಂಗಡಿಗಳಿಗೆ ನೀಡುತಿದ್ದ ಇಂಟರ್ನೆಟ್ ಸೌಲಭಕ್ಕೆ ರಾಜ್ಯ ಸರ್ಕಾರ ತಡೆ ನೀಡಿದೆ. ಇದರಿಂದ ಸಾಕಷ್ಟು ಜನರು ಇಂಟರ್ನೆಟ್ ಸೌಲಭದಿಂದ ವಂಚಿತರಾಗಿದ್ದಾರೆ ಎಂದು ರಾಜ್ಯ ಸರ್ಕಾರ ವಿರುದ್ಧ ಅಸಮಧಾನ ಹೊರಹಾಕಿದರು.
ನಮ್ಮದು ಇತ್ತ ಪೂರ್ಣ ಬಂಡವಾಳಶಾಹಿ ವ್ಯವಸ್ಥೆಯೂ ಅಲ್ಲ, ಅತ್ತ ಸಮಾಜವಾದಿ ವ್ಯವಸ್ಥೆಯೂ ಅಲ್ಲದ ಕಾರಣ ಬಿಎಸ್ಎನ್ಎಲ್ ನಂತಹ ಸರ್ಕಾರಿ ಉದ್ಯಮಗಳಿಗೆ ಸರಿಯಾದ ಕಾಯಕಲ್ಪ ಸಿಗುತಿಲ್ಲ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಇತರೆ ಸಂಸ್ಥೆಗಳೊಂದಿಗೆ ಸ್ಪರ್ಧೆ ನೀಡುವ ಅನಿವಾರ್ಯ ಎಲ್ಲರಿಗೂ ಇದೆ. ಆದ್ದರಿಂದ ನಿಮ್ಮ ಸೌಲಭಗಳು ಹೆಚ್ಚು ಜನರಿಗೆ ತಲುಪಲು ಹೆಚ್ಚು ಶ್ರಮಹಾಕಬೇಕು ಎಂದು ಹೇಳಿದರು.